ಚಾಮರಾಜನಗರ: ಮರಾಠ ಅಭಿವೃದ್ದಿ ಪ್ರಾಧಿಕಾರ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಶನಿವಾರ ನಗರದ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಗೊಳಿಸಿ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು, ‘ರಾಜ್ಯದಲ್ಲಿರುವುದು ಕನ್ನಡ ವಿರೋಧಿ ಸರ್ಕಾರ. ಕನ್ನಡ ವಿರೋಧಿ ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾರೆ. ಏಳು ಕೋಟಿ ಕನ್ನಡಿಗರ ಭಾವನೆಗೆ ಧಕ್ಕೆ ಮಾಡಿ ಮರಾಠ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಲಾಗಿದೆ’ ಎಂದು ಆರೋಪಿಸಿದರು.
ಜನವರಿ 9ರಂದು ರಾಜ್ಯದಾದ್ಯಂತ ರೈಲ್ವೆ ಬಂದ್ ಚಳವಳಿಗೆ ವಾಟಾಳ್ ನಾಗರಾಜು ಅವರು ಕರೆ ಕೊಟ್ಟಿದ್ದರು. ಆದರೆ ಆ ಕಾರ್ಯಕ್ರಮವನ್ನು ಜ30 ಕ್ಕೆ ಮುಂದೂಡಲಾಗಿದೆ. ರಾಜ್ಯ ಸರ್ಕಾರದ ಕನ್ನಡ ವಿರೋಧಿ ನೀತಿ ಖಂಡಿಸಿ, ಕೇಂದ್ರದ ಗಮನ ಸೆಳೆಯುವ ಸಲುವಾಗಿ ಸಾಂಕೇತಿಕವಾಗಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗಿದೆ’ ಎಂದರು.
ಇದುವರೆಗೆ ಕನ್ನಡ ವಿರೋಧಿ ನೀತಿ ಅನುಸರಿಸಿದ ಎಲ್ಲ ಸರ್ಕಾರಗಳು ಅವನತಿ ಕಂಡಿವೆ. ಸರ್ಕಾರ ತಕ್ಷಣವೇ ಮರಾಟ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಿತ್ಯ ನಿರಂತರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ರೈಲ್ವೆ ದರ ಹೆಚ್ಚಳ ಖಂಡನೆ: ಚಾಮರಾಜನಗರದಿಂದ ಮೈಸೂರಿಗೆ ಹೋಗುವ ತಿರುಪತಿ ಎಕ್ಸ್ಪ್ರೆಸ್ ರೈಲಿನ ಪ್ರಯಾಣ ದರವನ್ನು ಕೋವಿಡ್ ಸಮಯದಲ್ಲಿ ದುಪ್ಪಟ್ಟು ಹೆಚ್ಚಳ ಮಾಡಿರುವುದು ಖಂಡಿನೀಯ. ಇದರಿಂದ ಬಡವರಿಗೆ ಹೊರೆಯಾಗಿದೆ. ಕೂಡಲೇ ಪ್ರಯಾಣ ದರವನ್ನು ಕಡಿಮೆಮಾಡಬೇಕು’ ಎಂದು ಪ್ರತಿಭನಕಾರರು ಒತ್ತಾಯಿಸಿದರು.