ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ತಪಸ್ಸು, ಮಿಶ್ರ ಬೆಳೆಯಲ್ಲಿದೆ ಯಶಸ್ಸು

ಕೊಳ್ಳೇಗಾಲ: 4 ಎಕರೆಯಲ್ಲಿ ತರಹೇವಾರಿ ಬೆಳೆ ಬೆಳೆಯುತ್ತಿರುವ ರೈತ ಕಾಂತರಾಜು
ಅವಿನ್ ಪ್ರಕಾಶ್‌ ವಿ. 
Published 29 ಡಿಸೆಂಬರ್ 2023, 6:14 IST
Last Updated 29 ಡಿಸೆಂಬರ್ 2023, 6:14 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರಕ್ಕೆ ಸಮೀಪದ ಮುಡಿಗುಂಡದಲ್ಲಿ ರೈತ ಕಾಂತರಾಜು ಅವರು ಮಿಶ್ರ ಬೆಳೆ ಪದ್ಧತಿಯಲ್ಲಿ ಯಶಸ್ಸು ಕಂಡು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕೃಷಿ ಮಾಡಬೇಕು ಎನ್ನುವುದು ಕಾಂತರಾಜು ಅವರ ಬಾಲ್ಯದ ಕನಸು. ಅವರ ಕುಟುಂಬದ ಮೂಲ ಕಸುಬೇ ಕೃಷಿ. ವ್ಯವಸಾಯದಲ್ಲಿ ಅವರದ್ದು 25 ವರ್ಷಗಳ ಅನುಭವ. 

ನಾಲ್ಕು ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದು ವರ್ಷ ತರಕಾರಿಗಳನ್ನು ಬೆಳೆದರೆ ಮತ್ತೊಂದು ವರ್ಷ ಹಣ್ಣುಗಳನ್ನು ಬೆಳೆಯುತ್ತಾರೆ. ಅವರು ತಮ್ಮದೇ ಆದ ರೀತಿಯಲ್ಲಿ ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದಾರೆ.

ಮಿಶ್ರ ಬೆಳೆ ಬೆಳೆಯುವುದರಿಂದ ಈವರೆಗೂ ಒಂದು ಬಾರಿಯೂ ನಷ್ಟವಾಗಿಲ್ಲ ಎಂದು ಹೇಳುತ್ತಾರೆ ಕಾಂತರಾಜು. 

ವಿವಿಧ ಬೆಳೆ: ತಮ್ಮ ಭೂಮಿಯಲ್ಲಿ ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಹೀರೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಬೆಂಡೆ, ಬಾಳೆ,  ಅಡಿಕೆ, ತೆಂಗು ಬೆಳೆದಿದ್ದಾರೆ. ವಿವಿಧ ಬಗೆಯ ಸೊಪ್ಪುಗಳು, ಕಲ್ಲಂಗಡಿ ಸೇರಿದಂತೆ ಸುಮಾರು 10 ರಿಂದ 15 ರೀತಿಯ ಮಿಶ್ರ ಬೆಳೆಯೊಂದಿಗೆ  ವ್ಯವಸಾಯ ಮಾಡುತ್ತಿದ್ದಾರೆ. ಪ್ರತಿ ವರ್ಷ ಬೆಳೆಗಳನ್ನು ಬದಲಾಯಿಸುವುದು ಇವರ ವಿಶೇಷ.

ಒಂದು ವರ್ಷ ತರಕಾರಿಗಳನ್ನು ಬೆಳೆದರೆ ಮತ್ತೊಂದು ವರ್ಷ ಹಣ್ಣುಗಳನ್ನು ಬೆಳೆಯುತ್ತಾರೆ, ಇನ್ನೊಂದು ವರ್ಷ ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಾರೆ. ಹೀಗೆ ವರ್ಷಕ್ಕೊಂದು ಬೆಳೆಗಳನ್ನು ಬೆಳೆದು ಆದಾಯಗಳಿಸುತ್ತಿದ್ದಾರೆ. 

ನೇರ ಮಾರಾಟ: ಕಾಂತರಾಜು ಅವರು ತಾವು ಬೆಳೆದ ತರಕಾರಿ, ಸೊಪ್ಪು,ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡು ಹೋಗುವುದಿಲ್ಲ. ತಮ್ಮ ಜಮೀನಿನ ಸಮೀಪದಲ್ಲಿ ಮಾರಾಟ ಮಾಡುತ್ತಾರೆ. ಕೆಲವು ತರಕಾರಿಗಳನ್ನು ನೇರವಾಗಿ ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ.

‘ನಾನು ದಲ್ಲಾಳಿಗಳ ಮೂಲಕ ಬೆಳೆಗಳನ್ನು ಮಾರಾಟ ಮಾಡುತ್ತಿಲ್ಲ. ಈ ವರ್ಷ ಯಾವ ಬೆಳೆಯನ್ನು ಬೆಳೆಯುತ್ತೇನೆ ಎಂಬುದು ಸ್ಥಳೀಯರಿಗೆ ಗೊತ್ತಿರುತ್ತದೆ. ಹಾಗಾಗಿ, ಗ್ರಾಹಕರೇ ಜಮೀನಿನ ಬಳಿ ಬಂದು ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಾರೆ’ ಎಂದು ಹೇಳುತ್ತಾರೆ ಕಾಂತರಾಜು. 

ಪ್ರತಿನಿತ್ಯವೂ 10 ಕೆಜಿ 15 ಕೆಜಿಯಷ್ಟು ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಈಗ ಸೌತೆಕಾಯಿ, ಮೆಣಸಿನಕಾಯಿ, ಟೊಮೆಟೊಗಳನ್ನು ಬೆಳೆದಿದ್ದಾರೆ. ಈ ಮೂರೂ ತರಕಾರಿಗಳನ್ನು ನಿತ್ಯವೂ ಮಾರಾಟ ಮಾಡುತ್ತಿದ್ದಾರೆ. ತರಕಾರಿ ಮುಗಿದ ನಂತರ ಸೊಪ್ಪುಗಳನ್ನು ಹಾಕುತ್ತಾರೆ. ಅದಕ್ಕೂ ಗ್ರಾಹಕರಿದ್ದಾರೆ. 

ಕಾಂತರಾಜು
ಕಾಂತರಾಜು

Quote - ಮಿಶ್ರ ಬೆಳೆಯಲ್ಲಿ ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆ  ಲಾಭ ಕೊಡುತ್ತದೆ  25 ವರ್ಷಗಳಿಂದಲೂ ಇದೇ ಪದ್ಧತಿ ಅನುಸರಿಸುತ್ತಿದ್ದೇನೆ ಕಾಂತರಾಜು ರೈತ

Cut-off box - ಸಾವಯವ ರಾಸಾಯನಿಕ ಗೊಬ್ಬರ ಬಳಕೆ... ಕಾಂತರಾಜು ಅವರು ಪೂರ್ಣ ಸಾಯವಯ ಕೃಷಿಕರಲ್ಲ. ಇತ್ತ ಹೆಚ್ಚು ರಾಸಾಯನಿಕ ಬಳಸಿ ಕೃಷಿಯನ್ನೂ ಮಾಡುತ್ತಿಲ್ಲ. ಎರಡೂ ಪದ್ಧತಿಯನ್ನು ಸಮದೂಗಿಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ.  ‘ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಮಿಶ್ರಣ ಮಾಡಿಯೇ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ಅನೇಕ ಬೆಳೆಗಳಲ್ಲಿ ಯಶಸ್ಸು ಕಂಡಿದ್ದೇನೆ’ ಎಂದು ಹೇಳುತ್ತಾರೆ ಅವರು.  ‘ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಛಲದಿಂದ ನಾನು ಕೃಷಿಯನ್ನು ಅವಲಂಬಿಸಿದ್ದೇನೆ. ಯಾರ ಬಳಿಯೂ ನಾನು ಹೋಗುವುದಿಲ್ಲ. ರೈತರ ಮಕ್ಕಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಿಶ್ರ ಬೆಳೆಗಳನ್ನು ಬೆಳೆಯುವ ಯೋಜನೆ ಹಾಕಿಕೊಂಡಿದ್ದೇನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT