ಚಾಮರಾಜನಗರ: ಐದು ವರ್ಷಗಳ ನಂತರ, ಇದೇ 13ರಂದು ನಡೆಯಲಿರುವ ನಗರದ ಚಾಮರಾಜೇಶ್ವರಸ್ವಾಮಿ ರಥೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಜಾತ್ರೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಬುಧವಾರದಿಂದ ಆರಂಭಗೊಂಡಿವೆ.
2017ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಯಿಂದ ಬ್ರಹ್ಮರಥಕ್ಕೆ ಹಾನಿಯಾದ ಬಳಿಕ ರಥೋತ್ಸವ ನಿಂತಿತ್ತು. ಐದು ವರ್ಷಗಳ ಬಳಿಕ ಹೊಸ ರಥ ನಿರ್ಮಾಣವಾಗಿದ್ದು, ಈ ಬಾರಿ ಅದ್ದೂರಿಯಾಗಿ ರಥೋತ್ಸವ ನಡೆಸಲು ದೇವಾಲಯದ ಆಡಳಿತ ಮಂಡಳಿ, ಭಕ್ತರು ನಿರ್ಧರಿಸಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ರಥ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ.
ಧಾರ್ಮಿಕ ಕಾರ್ಯಕ್ರಮ: ರಥೋತ್ಸವದ ಅಂಗವಾಗಿ 12 ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬುಧವಾರವೇ ಇದಕ್ಕೆ ಚಾಲನೆ ನೀಡಲಾಗಿದೆ. 17ರವರೆಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಮೊದಲ ದಿನ ಅಂಕುರಾರ್ಪಣಪೂರ್ವಕ ವೃಷಭಾಧಿವಾಸ ಕಾರ್ಯಕ್ರಮ ನಡೆದಿದೆ.