ಚಾಮರಾಜನಗರ: 2023–24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರಾಜ್ಯದಾದ್ಯಂತ ಶುಕ್ರವಾರ ಆರಂಭವಾಗಿದ್ದು, ಜಿಲ್ಲೆಯಲ್ಲೂ 17 ಕೇಂದ್ರಗಳಲ್ಲಿ ನಡೆದಿದೆ.
ಮೊದಲ ದಿನ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಯಾವುದೇ ಅಡೆತಡೆ ಇಲ್ಲದೆ ನಡೆದಿದೆ.
ಕನ್ನಡ ವಿಷಯ ಪರೀಕ್ಷೆಗೆ 6,702 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 6,557 ಮಂದಿ ಹಾಜರಾಗಿದ್ದಾರೆ. 145 ಮಂದಿ ಪರೀಕ್ಷೆ ಬರೆದಿಲ್ಲ.
‘17 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಮೊದಲ ಪರೀಕ್ಷೆಗೆ ಶೇ 97.83 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಯಾವ ಪರೀಕ್ಷಾ ಕೇಂದ್ರದಲ್ಲಿಯೂ ತೊಂದರೆಯಾಗಿಲ್ಲ. ಸರಾಗವಾಗಿ ನಡೆದಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.
ಬಿಗಿ ಬಂದೋಬಸ್ತ್: ಪರೀಕ್ಷಾ ಅಕ್ರಮದ ಮೇಲೆ ನಿಗಾ ಇಡಲು ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು.
‘ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿತ್ತು’ ಎಂದು ಮಂಜುನಾಥ ಪ್ರಸನ್ನ ಮಾಹಿತಿ ನೀಡಿದರು.
7,328 ಮಂದಿ ನೋಂದಣಿ: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ 7,328 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ.
ಈ ಪೈಕಿ 6,541 ಮಂದಿ ಹೊಸ ವಿದ್ಯಾರ್ಥಿಗಳು. 302 ಖಾಸಗಿ ಅಭ್ಯರ್ಥಿಗಳು ಮತ್ತು 485 ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ.