ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಿದ್ದಗಂಗಾ ಶ್ರೀ ಜನ್ಮದಿನ, ತ್ರಿವಿಧ ದಾಸೋಹಿ ಸ್ಮರಣೆ

ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ; ಉಚಿತ ದಾಸೋಹ, ಪಾನಕ, ಮಜ್ಜಿಗೆ ವಿತರಣೆ
Last Updated 1 ಏಪ್ರಿಲ್ 2022, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನಾಚರಣೆಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ನಗರ, ಪಟ್ಟಣ, ಹೋಬಳಿ ಹಾಗೂ ಗ್ರಾಮಗಳಲ್ಲಿ ವೀರಶೈವ ಲಿಂಗಾಯತ ಮುಖಂಡರು, ಭಕ್ತವೃಂದದವರು ಉಚಿತ ದಾಸೋಹ, ಪ್ರಸಾದ, ಸಿಹಿ, ಮಜ್ಜಿಗೆ, ಪಾನಕವನ್ನು ಜನರಿಗೆ ವಿತರಿಸುವ ಮೂಲಕ ಕಾಯಕಯೋಗಿ, ತ್ರಿವಿಧ ದಾಸೋಹಿಗಳಾಗಿದ್ದ ಸ್ವಾಮೀಜಿ ಅವರನ್ನು ಸ್ಮರಿಸಿದರು.

ಜಿಲ್ಲಾ ಕೇಂದ್ರದ ವಿವಿಧೆಡೆ ಸ್ವಾಮೀಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಭಕ್ತವೃಂದದವರು ಹಮ್ಮಿಕೊಂಡಿದ್ದರು.

ಮಲ್ಲೇಶ್‌ ನೇತೃತ್ವದಲ್ಲಿ ದಾಸೋಹ: ಬಿಜೆ‍‍ಪಿ ಮುಖಂಡ ಅಮ್ಮನಪುರ ಮಲ್ಲೇಶ್‌ ನೇತೃತ್ವದಲ್ಲಿ ಅವರ ಸ್ನೇಹಿತರ ಬಳಗ ನಗರದ ವಿವಿಧೆಡೆ ದಾಸೋಹ, ಮಜ್ಜಿಗೆ, ಪಾನಕ, ಲಾಡು ವಿತರಿಸಿ ಲಿಂಗೈಕ್ಯ ಶ್ರೀಗಳಿಗೆ ಗೌರವ ಸಲ್ಲಿಸಿತು.

ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ದಾಸೋಹ ಮಧ್ಯಾಹ್ನದವರೆಗೂ ಮುಂದುವರೆಯಿತು. ಪ್ರಮುಖ ವೃತ್ತ ಹಾಗೂ ಸ್ಥಳಗಳಲ್ಲಿ ಮಜ್ಜಿಗೆ, ಪಾನಕ, ಲಾಡು ಹಾಗೂ ರೈಸ್ ಬಾತ್ ವಿತರಣೆ ಮಾಡಲಾಯಿತು.

ನಗರದ ಜೋಡಿ ರಸ್ತೆಯಲ್ಲಿರುವ ಅಧ್ಯಕ್ಷ ಹೋಟೆಲ್‌ನಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಉಚಿತವಾಗಿ ಶ್ರೀಗಳ ಹೆಸರಿನಲ್ಲಿ ಮಾಡಲಾಗಿತ್ತು.

ಅಧ್ಯಕ್ಷ ಹೋಟೆಲ್ ಮುಂಭಾಗ ಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ನಗರದ ವಿರಕ್ತ ಮಠದ ಚೆನ್ನಬಸವಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಚೆನ್ನಬಸವಸ್ವಾಮೀಜಿ ಮಾತನಾಡಿ ‘ಸಿದ್ದಗಂಗಾ ಶ್ರೀಗಳ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಮಲ್ಲೇಶ್ ಮತ್ತು ಅವರ ಸ್ನೇಹಿತರ ಬಳಗ ಆಚರಣೆ ಮಾಡಿದೆ. ಶ್ರೀಗಳು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ವಿದ್ಯೆ ಹಾಗೂ ದಾಸೋಹದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ್ ಚೇತನ ಹುಟ್ಟಿದ ದಿನದಂದು ನಗರದ ಅನೇಕ ಕಡೆ ಕಾರ್ಯಕ್ರಮ ಆಯೋಜನೆ ಮಾಡಿ, ಸೇವೆ ಮಾಡುತ್ತಿರುವುದು ಸಂತಸ ತಂದಿದೆ. ಶ್ರೀಗಳ ದಾಸೋಹ ಪ್ರೇರಣೆ ನಮ್ಮೆಲ್ಲರಿಗೂ ಮಾದರಿಯಾಗಬೇಕು’ ಎಂದರು.

ಮಲ್ಲೇಶ್ ಮಾತನಾಡಿ ‘ಶ್ರೀಗಳ 115ನೇ ಜನ್ಮದಿನವನ್ನು ವಿಜೃಂಭಣೆಯಿಂದ ಹಬ್ಬದ ಮಾದರಿಯಲ್ಲಿ ದಾಸೋಹ ನಡೆಸುವ ಮೂಲಕ ಆಚರಿಸಲಾಗುತ್ತಿದೆ. ಸಿದ್ದಗಂಗಾ ಶ್ರೀಗಳ ತ್ರಿವಿಧ ದಾಸೋಹ ಸೇವೆ ಪ್ರಪಂಚಕ್ಕೆ ಮಾದರಿ. ಅವರ ತತ್ವ, ಆದರ್ಶ ನಮಗೆ ದಾರಿದೀಪವಾಗಿದೆ. ನಮ್ಮೆಲ್ಲ ಸ್ನೇಹಿತರು ಒಟ್ಟಾಗಿ ಈ ದಾಸೋಹ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.

ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಮುಂಭಾಗ, ರಾಮಸಮುದ್ರದ ಪುಟ್ಟಣ್ಣ ಹೋಟೆಲ್ ಮುಂಭಾಗ, ಸರ್ಕಾರಿ ಆಸ್ಪತ್ರೆಯ ನಂದಿನಿ ಕೇಂದ್ರದ ಮುಂಭಾಗ, ನಗರಸಭೆ ಎದುರು ಹಾಗೂ ಸಂತೆಮರಹಳ್ಳಿ ವೃತ್ತದಲ್ಲಿ ದಾಸೋಹ ನಡೆಯಿತು.

ನಗರಸಭೆ ಅಧ್ಯಕ್ಷೆ ಆಶಾ, ಸದಸ್ಯರಾದ ಮನೋಜ್ ಪಟೇಲ್, ಶಿವರಾಜ್, ಮಹದೇವಯ್ಯ, ನಾಗೇಶ್, ರಾಘವೇಂದ್ರ, ಮಂಜುನಾಥ್, ಚಂದ್ರಶೇಖರ್, ಮುಖಂಡರಾದ ನಿಜಗುಣರಾಜು, ಕೊತ್ತಲವಾಡಿ ಕುಮಾರ್,ನಾಗೇಂದ್ರಸ್ವಾಮಿ, ಶಂಭುಪಟೇಲ್, ಪಿ.ಎನ್.ದಯಾನಿಧಿ, ಶಿವಕುಮಾರ್, ಬಸವಣ್ಣ, ಬಿಸಲವಾಡಿ ಬಸವರಾಜು, ಅರಕಲವಾಡಿ ಮಹೇಶ್, ಸತೀಶ್, ಆಲೂರು ರಮೇಶ್ ಬಾಬು, ಶಮಿತ್ ಕುಮಾರ್, ನಲ್ಲೂರು ಪರಮೇಶ್, ಮರಿಯಾಲ ಮಹೇಶ್ ಇದ್ದರು.

4,900 ಜನರಿಗೆ ಊಟ ವಿತರಣೆ
ಚಾಮರಾಜನಗರದ ಇಂಚರ ಹೋಟೆಲ್‌ ಸಮೂಹದ ಮಾಲೀಕ ಸ್ಟೈಲ್‌ ಮಂಜು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೋಟೆಲ್‌ ಪಕ್ಕದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಿಂಡಿ–ಊಟ ವಿತರಿಸಿದರು.

ಉಚಿತ ದಾಸೋಹ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ, ಬಿಜೆಪಿ ಮುಖಂಡ ನಿಜಗುಣರಾಜು, ಕಾಂಗ್ರೆಸ್‌ ಮುಖಂಡ ಬಿ.ಕೆ.ರವಿಕುಮಾರ್‌ ಸೇರಿದಂತೆ ಹಲವರು ಚಾಲನೆ ನೀಡಿದರು.

ಬೆಳಿಗ್ಗೆ 500 ಜನರಿಗೆ ತಿಂಡಿ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 4,500 ಜನರು ದಾಸೋಹದಲ್ಲಿ ಭಾಗವಹಿಸಿದ್ದಾರೆ. ದೀನಬಂಧು ಶಾಲೆಯ 400 ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

‘ಸ್ವಾಮೀಜಿ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷವೂ ಉಚಿತವಾಗಿ ಊಟದ ವ್ಯವಸ್ಥೆ ಮಾಡುತ್ತಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾಲ್ಕು ಪಟ್ಟು ಹೆಚ್ಚು ಜನರು ಬಂದಿದ್ದಾರೆ. ಮಧ್ಯಾಹ್ನ 4,500 ಮಂದಿ ಊಟ ಮಾಡಿದ್ದಾರೆ’ ಎಂದು ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT