ಯಳಂದೂರು: ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ ವಾಂತಿಭೇದಿಯಿಂದ ಬಳಲಿದ್ದ 9 ಜನರು ಮನೆಗೆ ಹಿಂತಿರುಗಿದ ನಂತರ, ಮತ್ತೆ ನಾಲ್ವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ ಮತ್ತು ಯಳಂದೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇದರ ನಡುವೆ, ಗ್ರಾಮದ ವೃದ್ಧ ನಿಂಗಯ್ಯ ಎಂಬುವವರು ಭಾನುವಾರ ಮರಣ ಹೊಂದಿದ್ದು, ಅವರು ಕಲುಷಿತ ನೀರಿನ ಸೇವನೆಯಿಂದಲೇ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅಧಿಕಾರಿಗಳನ್ನು ಇದನ್ನು ನಿರಾಕರಿಸಿದ್ದರು.
‘ನಿಂಗಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು’ ಎಂದು ಯಳಂದೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಮಾಹಿತಿ ನೀಡುತ್ತಿಲ್ಲ. ಸೋಮವಾರ ಸಂಜೆ ಮೃತರ ಅಂತ್ಯಕ್ರಿಯೆ ನಡೆದಿದೆ.
ಮತ್ತೆ ಅಸ್ವಸ್ಥರಾದವರಲ್ಲಿ ಮೂವರು ಯಳಂದೂರು ಆಸ್ಪತ್ರೆಗೆ ದಾಖಲಾಗಿದ್ದು, ಮತ್ತೊಬ್ಬರು ಚಾಮರಾಜನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಮೊದಲು ಅಸ್ವಸ್ಥರಾಗಿದ್ದ ಒಂಬತ್ತು ಮಂದಿ ಗ್ರಾಮದ ತೊಂಬೆಯ ಕಲುಷಿತ ನೀರು ಕುಡಿದಿದ್ದರು ಎಂದು ಹೇಳಲಾಗಿತ್ತು.