ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿಯ ವಿನಾಯಕ ಕಾನ್ವೆಂಟ್ ಅಕ್ಷರ ದಾಸೋಹ ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪಿ. ಮಹದೇವಪ್ಪ ಈಚೆಗೆ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸರಕಾರ ಅನುದಾನಿತ ಶಾಲೆಗಳ ಅಕ್ಷರ ದಾಸೋಹ ಅಡುಗೆ ಮನೆ ನಿರ್ಮಾಣಕ್ಕೆ ತಲಾ 3 ಲಕ್ಷ ಅನುದಾನ ಒದಗಿಸುತ್ತಿದೆ. ವಿನಾಯಕ ಶಿಕ್ಷಣ ಸಂಸ್ಥೆಯು 25 ವರ್ಷಗಳಿಂದ ಉತ್ತಮ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಅನುಕೂಲ ಕಲ್ಪಿಸಿದೆ.
ಈಗ ಅಡುಗೆ ಮನೆ ನಿರ್ಮಾಣಗೊಳ್ಳಲಿದ್ದು, ಸರಕಾರ ನೀಡುವ ಇತರೆ ಸೌಲಭ್ಯಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಿ. ಸ್ವಾಮಿ, ಸಂಸ್ಥೆಯ ಅಧ್ಯಕ್ಷ ಕೆ.ಎಚ್. ನಂಜಪ್ಪ, ಎಂಜಿನಿಯರ್ ಶಿವಕುಮಾರ್, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ, ಆಡಳಿತಾಧಿಕಾರಿ ಮಧುಕೇಶ್ವರ, ಜಯಣ್ಣ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು , ಪೋಷಕರು ಹಾಜರಿದ್ದರು.