ಯಳಂದೂರು: `ಎಲ್ಕೆಜಿ ಓದುತ್ತಿರು ವಾಗಲೇ ಕುಣಿಯಬೇಕೆಂಬ ಅದಮ್ಯ ಬಯಕೆ. ಅದರಲ್ಲೂ ಭಾರತೀಯ ವೇಷ ಭೂಷಣ ತೊಟ್ಟು ನಾಟ್ಯ ಮಾಡುವ ನೃತ್ಯಕಲಾ ಪ್ರಕಾರ ಕಂಡರೆ ಪಂಚ ಪ್ರಾಣ. ಇದರ ಜೊತೆಗೆ ಪೋಷಕರ ಸಹಕಾರ. ಪುಟ್ಟ-ಪುಟ್ಟ ಹೆಜ್ಜೆಗೆ ಗೆಜ್ಜೆ ಕಟ್ಟಲು ನೆರವಾದ ಗುರುಗಳು. ಇದೆ ಲ್ಲವೂ ಸೇರಿ ಆಗಿದ್ದು ನಾಟ್ಯಪ್ರವೀಣೆ. ಈಗ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ಅಲ್ಲೂ ಸೈ ಎನಿಸಿಕೊಂಡ ಬಾಲೆ.
ಇದು ಪಟ್ಟಣದ ಭಾನುಮತಿ- ರಾಜು ದಂಪತಿಗಳ ಮುದ್ದಿನ ಮಗಳಾದ `ನಿಸರ್ಗರಾಜ್~ಳ ಸಾಧನೆ. ಬಾಲ್ಯ ದಿಂದಲೇ ಭರತನಾಟ್ಯ ಹಾಗೂ ಲಘು ಸಂಗೀತದ ಗೀಳು ಬೆಳೆಸಿಕೊಂಡಿರುವ ಈ ಪೋರಿ ಪ್ರಸ್ತುತ ಎಸ್ಡಿವಿಎಸ್ ವಿದ್ಯಾಸಂಸ್ಥೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಈಕೆಯ ಸಾಧನೆಗೆ ನೀರೆರೆದು ಪೋಷಿಸಿದ್ದು ಪೋಷಕರು ಹಾಗೂ ಗುರುಗಳು ಎಂದು ನುಡಿಯವ ಈಕೆ, ನಾಟ್ಯ ಗುರುಗಳಾದ ಮಹೇಶ್, ಉಷಾ, ವೇಣುಗೋಪಾಲ್ ಅವರ ಬಳಿ ಭರತನಾಟ್ಯ ಕಲಿತಿದ್ದಾಳೆ. ಜಿಲ್ಲಾ, ತಾಲ್ಲೂಕು ಹಾಗೂ ರಾಜ್ಯಮಟ್ಟದಲ್ಲಿ ಪ್ರದರ್ಶನದ ಮೂಲಕ ಹತ್ತು ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.
ಈಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಶಾಲೆ ಸೇರಿದಂತೆ ಜಿಲ್ಲಾದ್ಯಂತ ನಡೆಯುವ ಇತರೆ ಸಭೆ ಸಮಾರಂಭಗಳಲ್ಲಿ ಈಕೆಯ ನೃತ್ಯದ ಝಲಕ್ ಒಂದು ಹೆಜ್ಜೆ ಮುಂದೆ ಎಂದೇ ಹೇಳಬೇಕು.