ಚಾಮರಾಜನಗರ: ನಗರದ ಗೌರಗರ ಬೀದಿಗೆ ಕಾಲಿಟ್ಟರೆ ಕಸದ ರಾಶಿ ಸ್ವಾಗತಿಸುತ್ತದೆ. ಮುಖ್ಯ ರಸ್ತೆಯ ಬದಿಯಲ್ಲಿಯೇ ಕಸ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಮಳೆ ನೀರಲ್ಲಿ ತ್ಯಾಜ್ಯಗಳು ಕೊಳೆತು ದುರ್ನಾತ ಬೀರು ತ್ತಿದೆ. ಇದರಿಂದಾಗಿ ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯ.
ಈ ರಸ್ತೆ ಇನ್ನೂ ಡಾಂಬರು ಭಾಗ್ಯ ಕಂಡಿಲ್ಲ. ಮಳೆ ಬಂದರಂತೂ ಕೆಸರು ಗದ್ದೆಯಂತಾಗುತ್ತದೆ. ಮಳೆನೀರಿನೊಂದಿಗೆ ಸೇರಿಕೊಂಡ ಕಸ ಬೀದಿ ಒಳಗೆಲ್ಲ ಹರಡಿಕೊಳ್ಳುತ್ತದೆ. ಇದರಿಂದ ಇಲ್ಲಿ ವಾಸಿಸಲು ಅಸಹನೀಯ ಪರಿಸ್ಥಿತಿ ಇದೆ. ಕಸದ ರಾಶಿಯಿಂದಾಗಿ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ.
ನಗರಸಭೆಯಿಂದ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ಜನರು ಕಂಡಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಸದ ರಾಶಿಯನ್ನು ತೆಗೆಸಬೇಕು ಮತ್ತು ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.