ಚಾಮರಾಜನಗರ: ತಾಲ್ಲೂಕಿನ ಕುಲಗಾಣ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆ ಕಾಮಗಾರಿಯನ್ನು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಭಾನುವಾರ ಪರಿಶೀಲಿಸಿದರು.
ಬೇಗೂರು- ಕವಲಂದೆ- ಕನಕಗಿರಿಯಿಂದ ಚಾಮರಾಜ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೈಪಾಸ್ ನಿರ್ಮಿಸ ಲಾಗುತ್ತಿದೆ. ಗ್ರಾಮದ ಮಧ್ಯದಲ್ಲಿಯೇ ಈ ರಸ್ತೆಯಿದೆ. ಇದು ಕಿರಿದಾಗಿದ್ದು ತಿರುವು ಹೊಂದಿದೆ. ಹೀಗಾಗಿ, ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ನಾಗರಿಕರು ತೊಂದರೆ ಅನುಭವಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮದ ಹೊರಭಾಗದಲ್ಲಿ ಅಂದಾಜು 10 ಲಕ್ಷ ರೂ ವೆಚ್ಚದಡಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಬೈಪಾಸ್ ರಸ್ತೆಯ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಕಾಮಗಾರಿ ಪರಿಶೀಲಿಸಿದ ಶಾಸಕ ಮಹದೇವಪ್ರಸಾದ್ ಮಾತನಾಡಿ, ಗ್ರಾಮಸ್ಥರ ಹಿತದೃಷ್ಟಿಯಿಂದ ಭಾರೀ ವಾಹನಗಳು ಊರಿನ ಮಧ್ಯಭಾಗದಲ್ಲಿ ಹಾದುಹೋಗದಂತೆ ತಡೆಯಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಗ್ರಾಮೀಣರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ರಸ್ತೆಯು ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕನಕಗಿರಿ ಹಾಗೂ ಬೇಗೂರು-ಕವಲಂದೆಗೂ ಸಂಪರ್ಕ ಕಲ್ಪಿಸುತ್ತದೆ. ಗುಣಮಟ್ಟದ ಕಾಮಗಾರಿ ನಿರ್ವ ಹಿಸಲು ಅಧಿಕಾರಿಗಳು ಒತ್ತು ನೀಡಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಚಂದ್ರ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆರೆಹಳ್ಳಿ ನವೀನ್, ಎಇಇ ಚಂದ್ರಶೇಖರ್, ಸಹಾಯಕ ಎಂಜಿನಿಯರ್ ಗಣೇಶ್ ಹೆಗಡೆ, ಕೆ.ಎಲ್. ರವಿಕುಮಾರ್, ಬಸವರಾಜು, ಮಹದೇವಯ್ಯ, ಮಾದಪ್ಪ, ನಾಗೇಶ್ ಹಾಜರಿದ್ದರು.