ಚಾಮರಾಜನಗರ: ಚಾಮುಂಡೇಶ್ವರಿ ಅಮ್ಮನವರವರ್ಧಂತಿಅಂಗವಾಗಿ ತಾಲ್ಲೂಕಿನ ವಡ್ಗಲ್ಪುರದ ಹುಂಡಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರು ಶುಕ್ರವಾರ ಚಂಡಿಕಾ ಹೋಮವನ್ನು ಅದ್ಧೂರಿಯಾಗಿ ನೆರವೇರಿಸಿದರು.
ಗುರುವಾರ ಸಂಜೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದವು.ಶುಕ್ರವಾರ ಮುಂಜಾನೆ 6.30 ಗಂಟೆಗೆಗಣಪತಿ ಪೂಜೆ, ನವಗ್ರಹ ಮೃತ್ಯುಂಜಯ ಕಳಸ ಪೂಜೆ ಮತ್ತು ಪ್ರಧಾನ ಕಳಸ ಪೂಜೆ, ಚಂಡಿಕಾ ಹೋಮ, ಮಹಾ ಪೂರ್ಣಾಹುತಿ, ಕುಂಭಾಭಿಷೇಕ ನಡೆಸಲಾಯಿತು.
ಮಧ್ಯಾಹ್ನ 12.30ಗಂಟೆಗೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದರು. ಸಮೀಪದ ಹೊನ್ನಹಳ್ಳಿ, ಅರಕಲವಾಡಿ, ವಡ್ಗಲ್ಪುರ ಸೇರಿದಂತೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಚಂಡಿಕಾ ಹೋಮದಲ್ಲಿ ಭಾಗಿಯಾದರು.
ಚಾಮುಂಡಿಗೆ ವಿಶೇಷ ಅಲಂಕಾರ: ಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ಪಟ್ಟಣದ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಚಾಮುಂಡೇಶ್ವರಿ ಅಮ್ಮನವರಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಅಮ್ಮನವರ ಮೂರ್ತಿಗೆ ತರಕಾರಿಗಳಿಂದ ವಿಶೇಷ ಅಲಂಕಾರ ಮಾಡಲಾಯಿತು.
ಆಷಾಢ ಮಾಸದ ಮೂರನೇ ಶುಕ್ರವಾಗಿದ್ದರಿಂದ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಬಂದು ದೇವಿಯ ದರ್ಶನ ಮಾಡಿದರು. ನಿಂಬೆ ಹಣ್ಣಿನ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.