ಗುಂಡ್ಲುಪೇಟೆ: ಸಾರ್ವತ್ರಿಕ ಚುನಾವಣೆಯು ಶಾಂತಿ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಮತದಾರರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಸತೀಶ್ ಮನವಿ ಮಾಡಿದರು.ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ, ಜಾತಿಯ ಪ್ರಭಾವಕ್ಕೆ ಒಳಗಾಗದೆ ಮತ ಚಲಾಯಿಸಿ. ಯಾವೂದೇ ಅಮಿಷಕ್ಕೆ ಒಳಗಾಗಬೇಡಿ. ಚುನಾವಣೆ ಸಂಬಂಧ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ರಾಜಕೀಯ ಪಕ್ಷಗಳು ಕೂಡ ನಿಯಮ ಮೀರದಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹಂಗಳ, ಬೇಗೂರು, ಕಸಬಾ, ತೆರಕಣಾಂಬಿ ಹಾಗೂ ಚಾಮರಾನಗರ ತಾಲ್ಲೂಕಿನ ಹರವೆ ಹೋಬಳಿಗಳಲ್ಲಿ ಒಟ್ಟು 250 ಮತಗಟ್ಟೆಗಳಿವೆ. ಇವುಗಳಲ್ಲಿ 86 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಇವುಗಳಲ್ಲಿ 34 ಕಾಡಚಿನ ಮತಗಟ್ಟೆಗಳಾಗಿವೆ ಎಂದು ಮಾಹಿತಿ ನೀಡಿದರು.ಚುನಾವಣೆ ಸಂಬಂಧ ದೂರು ಸಲ್ಲಿಸಲು ತಾಲ್ಲೂಕು ಕಚೇರಿಯ ರೂಂ ನಂಬರ್ 34ರಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಕುರುಬರಹುಂಡಿ, ಹಿರೀಕಾಟಿ, ಬಂಡೀಪುರ, ಮೂಲೆಹೊಳೆಯಲ್ಲಿ 4 ಚೆಕ್ಪೋಸ್ಟ್ ತೆರೆಯಲಾಗಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪಾಲನೆ ಮಾಡಲು 1 ಎಂಸಿಸಿ ತಂಡ (ಕೆಆರ್ಐಡಿಎಲ್ ಎಇಇ, ಬಿಇಒ, ತಾ.ಪಂ ಇಒ, ಪುರಸಭೆ ಸಿಒ) ಹಾಗೂ 14 ಮಂದಿ ಸೆಕ್ಟರ್ ಅಧಿಕಾರಿಗಳು ಹಾಗೂ 6 ಫ್ಲಾಯಿಂಗ್ ಸ್ಕ್ವಾಡ್, 1 ವಿಡಿಯೊ ವೀವಿಂಗ್, 2 ವಿಡಿಯೊ ಸರ್ವೈಲೈನ್ಸ್, 6 ಸ್ಟಾಟಿಕ್ ಸರ್ವೈಲೈನ್ಸ್, 1 ಚುನಾವಣಾ ವೆಚ್ಚ ನಿರ್ವಹಣೆ ತಂಡ ರಚನೆ ಮಾಡಲಾಗಿದೆ ಎಂದರು.
ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ಬಿಡತಕ್ಕವು ಹಾಗೂ ವರ್ಗಾವಣೆ ಬಗ್ಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಸಲಹಾ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಕೊಳ್ಳಬೇಕು ಎಂದರು.ದೂರುಗಳಿಗಾಗಿ (ಜಿಲ್ಲಾಧಿಕಾರಿ 9480010123, ಹೆಚ್ಚುವರಿ ಜಿಲ್ಲಾಧಿಕಾರಿ 9743304202, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆ.ಎಚ್.ಸತೀಸ್ 9480843026, ಸಹಾಯಕ ಚುನಾವಣಾಧಿಕಾರಿ ಎಚ್.ಆರ್.ಚಂದ್ರಕುಮಾರ್ 9900945905) ಅವರನ್ನು ಸಂಪರ್ಕಿಸಬಹುದು ಎಂದರು. ತಹಶೀಲ್ದಾರ್, ಸಹಾಯಕ ಚುನಾವಣಾಧಿಕಾರಿ ಎಚ್.ಆರ್.ಚಂದ್ರಕುಮಾರ್ ಇದ್ದರು.
**
ಪ್ರಚಾರಕ್ಕಾಗಿ ವಿವಿಧ ಸಭೆ, ಸಮಾರಂಭ, ಜಾಥಾ ನಡೆಸಲು ಹಾಗೂ ವಾಹನಗಳ ಪರವಾನಗಿ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ – ಸತೀಶ್, ಚುನಾವಣಾಧಿಕಾರಿ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.