ಕಾಸರಗೋಡು: ಮುಳ್ಳೇರಿಯ ಸಮೀಪದ ಅಡೂರು ಮಾಟೆ ಎಂಬಲ್ಲಿ ಒಂದೇ ಕುಟುಂಬದ ಪತಿ, ಪತ್ನಿ ಇಬ್ಬರು ಮಕ್ಕಳು ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಧಾಕೃಷ್ಣ (39), ಪತ್ನಿ ಪ್ರಸೀತಾ, ಕಾಶಿನಾಥ (5), ಶಬರಿನಾಥ (3) ಮೃತಪಟ್ಟವರು. ಆದೂರು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯಿಂದ ಪತಿಗೆ ಜೀವ ಬೆದರಿಕೆ
ಬೆಂಗಳೂರು: ಪತ್ನಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಪತಿ ಬೇಗೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಜೆ.ಪಿ ನಗರ ಏಳನೇ ಹಂತದ ಮುತ್ತಪ್ಪ ಗಾರ್ಡ್ನ್ ನಿವಾಸಿ ಬೃಜೇಶ್ ಯಾದವ್ (35) ಅವರು ಪತ್ನಿ ಊರ್ಮಿಳಾ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ.
‘ಪತ್ನಿ ಆಕೆಯ ಸ್ನೇಹಿತರೊಂದಿಗೆ ನಮ್ಮ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದು, ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಯಾದವ್ ದೂರಿನಲ್ಲಿ ಹೇಳಿದ್ದಾರೆ.
ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ. ಪತ್ನಿ, ಪತ್ನಿ ವೈಮಸ್ಸಿಗೆ ಸ್ಪಷ್ಟಕಾರಣ ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
44 ಕೆ.ಜಿ. ಚಿನ್ನ ವಶ
ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸೂರು ರಸ್ತೆಯಲ್ಲಿರುವ ಮಳಿಗೆಗೆ ಸಾಗಿಸಲಾಗುತ್ತಿದ್ದ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು, ಸುಮಾರು 44 ಕೆ.ಜಿ ಚಿನ್ನ, ಡಿಬಿಎನ್ ಗನ್, ಐದು ಕಾಟ್ರಿಜ್, 77 ಬ್ಲೂಡಾರ್ಟ್ ಏರೋ ಬಿಲ್ಗಳು ಜಪ್ತಿ ಮಾಡಿದ್ದಾರೆ.
ತಮ್ಮಯ್ಯ ಸೋಮಯ್ಯ, ಸ್ಟಾಲ್ವರ್ಟ್ ಸೆಕ್ಯೂರಿಟಿ ಸರ್ವಿಸಸ್ ಇಂಡಿಯಾ ಲಿಮಿಟೆಡ್, ಬ್ಲೂಡಾರ್ಟ್ ಕೊರಿಯರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಟೈಟಾನ್ ತನಿಷ್ಕ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಲೂಡಾರ್ಟ್ ಕಂಪನಿಗೆ ಸೇರಿದ ಸರಕು ಸಾಗಣೆ ವಾಹನದಲ್ಲಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಸಿಕ್ಕ ಮಾಹಿತಿ ಆಧರಿಸಿ, ಚುನಾವಣೆ ಅಕ್ರಮ ತಡೆಗಟ್ಟಲು ನೇಮಿಸಿರುವ ಪ್ಲೇಯಿಂಗ್ ಸ್ಕ್ವಾಡ್ ಕುಬೇರ್ ನಾಯಕ ಮತ್ತು ಪೊಲೀಸ್ ಅಧಿಕಾರಿಗಳು ಹೊಸೂರು ಮುಖ್ಯರಸ್ತೆಯ ರೂಪೆನ್ ಅಗ್ರಹಾರ ಬಸ್ನಿಲ್ದಾಣದ ಸಮೀಪ ಸ್ಕೈವಾಕ್ ಬಳಿ ವಾಹನ ತಪಾಸಣೆ ನಡೆಸಿದಾಗ ಚಿನ್ನ, ಗನ್ ಇರುವುದು ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.