ಬೆಂಗಳೂರು: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನಲ್ಲಿ ಸಕ್ರಿಯರಾಗಿದ್ದ ಪ್ರಮುಖರಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಾಗಿ ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್ ಭರವಸೆ ನೀಡಿದ್ದಾರೆ.
ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವುದು ಬೇಡ ಎಂದು ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಕೆಲವರು ಮನವಿ ಮಾಡಿದ್ದರು. ಅವರಿಗೆ ಟಿಕೆಟ್ ನೀಡಿದಲ್ಲಿ ಠೇವಣಿ ಕೂಡ ಸಿಗುವುದಿಲ್ಲ ಎಂದೂ ಮನವಿಯಲ್ಲಿ ವಿವರಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದಿದ್ದ ಯುವ ಬ್ರಿಗೇಡ್ನ ಆನೇಕಲ್ ದೊಡ್ಡಯ್ಯ, ‘ಈಶ್ವರಪ್ಪಗೆ ಟಿಕೆಟ್ ನೀಡದೇ ಇದ್ದರೆ ಮತ್ತೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ಆರಂಭಿಸಬೇಕಾಗುತ್ತದೆ. ಪಕ್ಷದ ಮೇಲೆ ಇದು ದುಷ್ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದ್ದರು.
ಈ ಬೆಳವಣಿಗೆಗೆ ತಡೆಯೊಡ್ಡಲು ಮುಂದಾದ ರಾವ್, ಬ್ರಿಗೇಡ್ನ ರಾಜ್ಯ ಘಟಕದ ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಮೂರ್ತಿ, ಕಾಶೀನಾಥ್ ಹುಡೇದ್ ಜತೆ ಮಾತುಕತೆ ನಡೆಸಿದರು. 21 ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಲೇಬೇಕು ಎಂದು ಬ್ರಿಗೇಡ್ ಪ್ರಮುಖರು ಈ ವೇಳೆ ಪಟ್ಟು ಹಿಡಿದರು.
‘ಕ್ಷೇತ್ರ ಸಮೀಕ್ಷೆ ನಡೆಸುವ ವೇಳೆ ಎಲ್ಲರ ಹೆಸರನ್ನೂ ಪರಿಗಣಿಸಲಾಗುವುದು. ಗೆಲ್ಲುವ ಅಭ್ಯರ್ಥಿ ಇದ್ದರೆ ಖಂಡಿತಾ ಟಿಕೆಟ್ ನೀಡುವುದಾಗಿ ರಾವ್ ಭರವಸೆ ನೀಡಿದರು’ ಎಂದು ಮೂಲಗಳು ಹೇಳಿವೆ.
ಬ್ರಿಗೇಡ್ ನೀಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಈಶ್ವರಪ್ಪ (ಶಿವಮೊಗ್ಗ), ಮಾಜಿ ಸಂಸದ ವಿರೂಪಾಕ್ಷಪ್ಪ (ಸಿಂಧನೂರು), ವೆಂಕಟೇಶ್ ಮೂರ್ತಿ (ಪದ್ಮನಾಭ ನಗರ), ದೊಡ್ಡಯ್ಯ ಆನೇಕಲ್ (ಬೆಂಗಳೂರು ದಕ್ಷಿಣ) ಅವರ ಹೆಸರಿದೆ.