ಚಿಂತಾಮಣಿ: ಗಡಿಭಾಗದಲ್ಲಿ ಕ್ಷೀಣಿಸುತ್ತಿರುವ ನಾಟಕ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಮಾಜ ಸೇವಕ ಪಿ.ಎಲ್.ವೆಂಕಟರಾಮರೆಡ್ಡಿ ಅಭಿಪ್ರಾಯಪಟ್ಟರು.
ನಗರದ ವಿದ್ಯಾಗಣಪತಿ ರಂಗ ಮಂದಿರದಲ್ಲಿ ಚಿಕ್ಕಬಳ್ಳಾಪುರ ಐಶ್ವರ್ಯ ಕಲಾನಿಕೇತನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ ಮಾತನಾಡಿ ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆಗೆ ಶಾಲಾ ಶಿಕ್ಷಣ ಹಾಗೂ ಸರ್ವಾಂಗೀಣ ವಿಕಸನಕ್ಕೆ ರಂಗಶಿಕ್ಷಣದ ಅಗತ್ಯವಿದೆ. ಶಾಲಾ ಶಿಕ್ಷಣದಿಂದಲೇ ವಿದ್ಯಾರ್ಥಿಗಳಿಗೆ ನಾಟಕ ಕಲೆಯ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ನಗರದ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಮೂಡಿಬಂತು. ಎಂ.ಎಸ್.ನರಸಿಂಹಮೂರ್ತಿ ರಚಿಸಿ ಸಂಗೀತ ಅಶ್ವತ್ಥ ನಿರ್ದೇಶನದ ‘ಕಿವುಡು ಸಾರ್ ಕಿವುಡು’ ಹಾಸ್ಯ ನಾಟಕವನ್ನು ಬೆಂಗಳೂರಿನ ಸಾಯಿ ಸಾಂಸ್ಕೃತಿಕ ಸಂಸ್ಥೆಯ ತಂಡ ಮನೋಜ್ಞವಾಗಿ ಅಭಿನಯಿಸಿತು.
ವಿದ್ಯಾಗಣಪತಿ ರಂಗಮಂದಿರದ ವಿಭಾಕರರೆಡ್ಡಿ, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ನಾಗರಾಜ್, ಐಶ್ವರ್ಯ ಕಲಾನಿಕೇತನದ ಸಂಸ್ಥಾಪಕ ಕಾರ್ಯದರ್ಶಿ ಜಿ.ವಿ.ಪ್ರಸನ್ನ ಕುಮಾರ್, ಸಂಚಾಲಕ ರಾಜೇಶ್ ಕಶ್ಯಪ್, ಪಿ.ಎಸ್.ವೆಂಕಟೇಶ್, ಕೆ.ಎಸ್.ವೆಂಕಟೇಶ್, ದೇವತಾದೇವರಾಜ್ ಇದ್ದರು.