ಚಿಂತಾಮಣಿ: ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಸಾರಥ್ಯದಲ್ಲಿ)ಯ ತಾಲ್ಲೂಕು ಮತ್ತು ಜಿಲ್ಲಾ ಘಟಕದಿಂದ ಭಾನುವಾರ ನಗರದ ಕನಂಪಲ್ಲಿ ಕೆರೆಗೆ ಬಾಗಿನ ಅರ್ಪಿಸಲಾಯಿತು.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಂಬರೀಶ್ ಮಾತನಾಡಿ, ಪ್ರತಿವರ್ಷ ಒಳ್ಳೆಯ ಮಳೆ, ಬೆಳೆಯಾಗಿ ರೈತರು ಸಮೃದ್ಧಿಯಾಗಿರಲಿ. ಸಾರ್ವಜನಿಕರ ನೀರಿನ ಸಮಸ್ಯೆ ಪರಿಹಾರವಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.
2017ರಲ್ಲಿ ಕೆರೆ ತುಂಬಿ ಕೋಡಿ ಹರಿದರೂ ನಗರದ 31 ವಾರ್ಡ್ಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ನಗರಸಭೆ ವಿಫಲವಾಗಿತ್ತು. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಕೃಷಿ ಹೊಂಡದ ನೀರನ್ನು ಸರಬರಾಜು ಮಾಡಿದ್ದನ್ನು ಸ್ಮರಿಸಿಕೊಳ್ಳಬೇಕು ಎಂದರು.
ಜನಪ್ರತಿನಿಧಿಗಳು ಕಂಡೂಕಾಣದವರಂತೆ ಅಥವಾ ರಾಜಕೀಯ ಒತ್ತಡಗಳಿಂದ ಸುಮ್ಮನಾಗಬಾರದು. ಯಾವುದೇ ಪಕ್ಷವಾದರೂ ಸರಿ, ತಪ್ಪು ನಡೆಯುತ್ತಿದ್ದರೆ ಸರಿಪಡಿಸಲು ಪ್ರಯತ್ನಿಸಬೇಕು ಎಂದರು.
ಮುಖಂಡರಾದ ಅರುಣ ಬಾಬು, ಎನ್. ಮಂಜುನಾಥ್, ಆರ್. ನಾಗರಾಜ್, ಆರ್. ಲಕ್ಷ್ಮೀಪತಿ, ಜನಾರ್ದನ ಪೂಜಾರಿ, ಹರೀಶ್, ಕಲ್ಯಾಣ ಪ್ರಭು, ಮಾದೇಶ್, ರಮೇಶ್, ವೆಂಕಟಸ್ವಾಮಿ, ಪಾಪಣ್ಣ, ನರಸಿಂಹ, ಶ್ರೀಕಂಠ, ರಾಜಪ್ಪ, ಸಿ.ಡಿ. ಶಂಕರ್, ನಂಜುಂಡಿ, ಅಜಯ್, ನಾರಾಯಣಸ್ವಾಮಿ ಹಾಜರಿದ್ದರು.