ಬಾಗೇಪಲ್ಲಿ: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಅತಿ ಹೆಚ್ಚಾಗಿ ಫ್ಲೋರೈಡ್ ಅಂಶ ಇರುವುದರಿಂದ ಕ್ಷೇತ್ರದ ಎಲ್ಲಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ’ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಚಿಕ್ಕತಿಮ್ಮನಹಳ್ಳಿ, ಕಂಬಾಲಪಲ್ಲಿ, ನೀರಗಂಟಿಪಲ್ಲಿ, ಗುಟ್ಟಮೀದಪಲ್ಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಳೆದ ಎರಡು ತಿಂಗಳುಗಳಿಂದ ತಾಲ್ಲೂಕಿನಲ್ಲಿ ಉತ್ತಮವಾಗಿ ಮಳೆ ಆಗಿದೆ. ಕೆರೆ-ಕುಂಟೆ, ಚೆಕ್ಡ್ಯಾಂಗಳಲ್ಲಿ ಅರ್ಧದಷ್ಟು ನೀರು ತುಂಬಿದೆ. ಅಂತರ್ಜಲ ಮಟ್ಟವೂ ಸುಧಾರಿಸಿದೆ. ಕುಡಿಯುವ ನೀರಿಗೆ ತೊಂದರೆ ಇಲ್ಲ. ಇರುವ ನೀರನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕು. ನೀರನ್ನು ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.
ಕೃಷಿಹೊಂಡ, ಚೆಕ್ ಡ್ಯಾಂ, ಕೆರೆ-ಕುಂಟೆಗಳಲ್ಲಿ ನೀರನ್ನು ಶೇಖರಣೆ ಮಾಡಿಕೊಳ್ಳಬೇಕು. ಕೃಷಿಗೆ ಈ ನೀರು ಬಳಸಿಕೊಂಡು ರೈತರು ಉತ್ತಮವಾದ ಬೆಳೆ ಬೆಳೆಯಬೇಕು ಎಂದರು.
ರೈತರು ಹೈನುಗಾರಿಕೆಯ ಜೊತೆಗೆ ರೇಷ್ಮೆ ಬೆಳೆಯಬೇಕು. ರಾಸುಗಳಿಗೆ ಮೇವನ್ನು ಬೆಳೆಸಿಕೊಂಡು ಗುಣಮಟ್ಟದ ಹಾಲು ನೀಡಬೇಕು. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಯಾವುದೇ ಕಾರಣಕ್ಕೂ ಹಸು, ಎಮ್ಮೆಗಳನ್ನು ಮಾರಾಟ ಮಾಡದೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಕ್ಷೇತ್ರದ ಯಾವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇಲ್ಲ ಎಂಬ ಬಗ್ಗೆ ನನ್ನ ಗಮನಕ್ಕೆ ತಂದರೆ ಘಟಕ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಲಿಂಗಾರೆಡ್ಡಿ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ಮುಖಂಡರಾದ ಪಾತಕೋಟೆ ಸುಬ್ಬಾರೆಡ್ಡಿ, ವೆಂಕಟರಾಮರೆಡ್ಡಿ, ಗೋಪಾಲ್ ಹಾಜರಿದ್ದರು.