ಗೌರಿಬಿದನೂರು: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸಿದ್ದ ಸಂತೆ ಮೈದಾನದ ಲಾರಿ ಚಾಲಕ ಪರಾರಿಯಾಗಿದ್ದರಿಂದ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು. ಬಳಿಕ ಪತ್ತೆಹಚ್ಚಿ ಬಂಧಿಸಿ ಪುನಃ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.
ಇತ್ತೀಚೆಗೆ ನಗರದ ಲಾರಿ ಚಾಲಕ ಸರಕು ಸಾಮಗ್ರಿಗಳನ್ನು ತುಂಬಿಕೊಂಡು ಉತ್ತರ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸಾದ ನಂತರ ನಗರದಲ್ಲಿ ಎಲ್ಲೆಂದರಲ್ಲೆ ಸುತ್ತಾಡುತ್ತಿದ್ದರು.
ಇದರಿಂದ ಭಯಗೊಂಡ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಆತನನ್ನು ವಶಕ್ಕೆ ಪಡೆದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದರು.
ಕ್ವಾರಂಟೈನ್ ಸ್ಥಳದಿಂದ ಪರಾರಿಯಾಗಿ ಲಾರಿಯಲ್ಲಿ ಬೆಂಗಳೂರಿನತ್ತ ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತೊಂಡೇಬಾವಿ ಬಳಿ ವಶಕ್ಕೆ ಪಡೆದು ಪುನಃ ಆಸ್ಪತ್ರೆಯಲ್ಲಿ ಪೊಲೀಸರ ಬಿಗಿ ಕಾವಲಿನ ನಡುವೆ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ.