ಚಿಕ್ಕಬಳ್ಳಾಪುರ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅವರು ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಮಂಡಿಕಲ್, ಮಂಚನಬಲೆ, ನಂದಿಯಲ್ಲಿ ವಿವಿಧ ಸಂಘಟನೆಗಳಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಕರ್, ‘ಜಿಲ್ಲೆಯೂ ಬಹುಹಿಂದಿನಿಂದಲೂ ಶಾಂತಿ, ಸಹಬಾಳ್ವೆಗೆ ಹೆಸರಾಗಿದೆ. ಆ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕಿದೆ. ಆದ್ದರಿಂದ ಪ್ರತಿಯೊಂದು ಹಬ್ಬವನ್ನು ನಾಗರಿಕರು ಭಾವೈಕ್ಯತೆಯಿಂದ ಆಚರಿಸಬೇಕು’ ಎಂದು ಹೇಳಿದರು.
‘ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ (ಪಿಒಪಿ) ತಯಾರಿಸಿದ ಮೂರ್ತಿಗಳಿಗೆ ಹಾನಿಕಾರಕ ರಾಸಾಯನಿಕ ಮಿಶ್ರಿತ ಬಣ್ಣ ಬಳೆದಿರುತ್ತಾರೆ. ಆದ್ದರಿಂದ ಪಿಒಪಿ ಮೂರ್ತಿಗಳನ್ನು ಬಳಸುವುದು ಪರಿಸರಕ್ಕೆ ಹಾನಿಕಾರಕ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾದ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ದ್ಯಾವಣ್ಣ, ಗೋವಿಂದಸ್ವಾಮಿ, ಮೋಹನ್, ಚನ್ನಕೃಷ್ಣಾರೆಡ್ಡಿ, ಅಪ್ಪಾಲು ಮಂಜು, ಅಜ್ಜವಾರ ದಯಾನಂದ್ ಹಾಜರಿದ್ದರು.