ಗುಡಿಬಂಡೆ: ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ, ರೈತರ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ ರೈತರಿಗೆ ಎಂಎಸ್ಪಿ (ಬೆಂಬಲ ಬೆಲೆ) ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಐಕ್ಯ ಸಮಿತಿಯಿಂದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಪಿಐಎಂ ಮುಖಂಡ ಲಕ್ಷ್ಮಿನಾರಾಯಣ ಮಾತನಾಡಿ, ರೈತರು ಶ್ರಮವಹಿಸಿ ದುಡಿದು ದೇಶದ ಜನರಿಗೆ ಅನ್ನ ನೀಡುತ್ತಾ ಬಂದಿದ್ದೇವೆ. ಎಲ್ಲ ರೀತಿಯ ಅರ್ಥಿಕ ವಲಯಗಳು ಕ್ಷೀಣಿಸಿದ್ದರೂ ರೈತರು ಮಾತ್ರ ದೇಶದ ಬೆನ್ನೆಲುಬಾಗಿ ನಿಂತು, ದಾಖಲೆ ಮಟ್ಟದಲ್ಲಿ ಆಹಾರ ಉತ್ಪಾದನೆ ಮಾಡಿದ್ದಾರೆ. ಗೋದಾಮುಗಳು ತುಂಬಾ ಆಹಾರ ಹರಿಯುವುದನ್ನು ಖಾತರಿಯಾಗಿದೆ. ಅದಾಗ್ಯೂ ಕೇಂದ್ರ ಸರ್ಕಾರ ರೈತ ವಿರೋಧಿ ಕರಾಳ ಕಾನೂನುಗಳನ್ನು ಜಾರಿಗೆ ತಂದಿರುವುದು ಅಸಂವಿಧಾನಿಕವಾಗಿದೆ ಎಂದರು.
ರೈತರ ಭವಿಷ್ಯವನ್ನು ಗಮನದಲ್ಲಿಟ್ಟು ಸ್ವಾಮಿನಾಥನ್ ಆಯೋಗದ ಶಿಫಾರಸು ಬಳಸಿಕೊಂಡು ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲಾ ಸಂಚಾಲಕ ಜಿ.ವಿ.ಗಂಗಪ್ಪ, ಇಸ್ಕೂಲ್ ನರಸಿಂಹಪ್ಪ, ದಪ್ಪರ್ತಿ ಮುರಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಂಜುನಾಥ್, ರೈತ ಸಂಘದ ನಾರಾಯಣಸ್ವಾಮಿ ಇದ್ದರು.