ಗೌರಿಬಿದನೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ತೆರಳುತ್ತಿದ್ದ ಸರ್ಕಾರಿ ವಾಹನ ಮಂಗಳವಾರ ಸಂಜೆ ನಗರದ ನ್ಯಾಷನಲ್ ಕಾಲೇಜಿನ ಬಳಿ ಪಂಕ್ಚರ್ ಆದ ಪರಿಣಾಮ ಸಚಿವರು ಮತ್ತೊಂದು ಕಾರಿನಲ್ಲಿ ತೆರಳಿದರು.
ನಗರ ಹೊರವಲಯದ ಚೆಲ್ಲಾ ಫಾರಂನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಆಯೋಜಿಸಿದ್ದ ಸಭೆಗೆ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಳಿಕ ಸಚಿವರು ಕಾರಿನಿಂದ ಕೆಳಗಿಳಿದು ಪರ್ಯಾಯವಾಗಿ ಮತ್ತೊಂದು ಕಾರಿನ ಮೂಲಕ ತೆರಳಿದರು. ಸಚಿವರ ಬೆಂಬಲಿಗರು ಹಾಗೂ ಕೆಲವು ಕಾರ್ಯಕರ್ತರು ಸ್ಥಳದಲ್ಲೇ ಇದ್ದು ನಸು ಕತ್ತಲಿನಲ್ಲಿ ಕಾರಿನ ಚಕ್ರಕ್ಕೆ ಪಂಕ್ಚರ್ ಹಾಕಿಸುವ ಕಾರ್ಯಕ್ಕೆ ಮುಂದಾಗಿದ್ದರು.
ಮಾರ್ಚ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ, ಸ್ಥಳೀಯ ಕಾರ್ಯಕರ್ತರೊಂದಿಗೆ ಪೂರ್ವಭಾವಿಯಾಗಿ ಸಭೆ ನಡೆಸುವ ಸಲುವಾಗಿ ಸಚಿವರು ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.