ಚಿಕ್ಕಬಳ್ಳಾಪುರ: ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಶುಕ್ರವಾರ ಸಂಜೆ ದಿಢೀರ್ ಸುರಿದ ಆಲಿಕಲ್ಲು ಸಹಿತ ಅಕಾಲಿಕ ಮಳೆಗೆ ದ್ರಾಕ್ಷಿ ಸೇರಿದಂತೆ ಅನೇಕ ಬೆಳೆಗಳು ನೆಲ ಕಚ್ಚಿವೆ.
ಇತ್ತೀಚೆಗೆ ಜಿಲ್ಲೆಯ ಕೆಲ ಭಾಗಗಳಲ್ಲಿ ಎರಡ್ಮೂರು ಬಾರಿ ಸಾಧಾರಣ ಮಳೆ ಸುರಿದಿತ್ತು. ಶುಕ್ರವಾರ ಸಂಜೆ ದಿಬ್ಬೂರು, ಗಂಗರೇಕಾಲುವೆ, ಅಂಗರೇಖನಹಳ್ಳಿ, ಚಿಮನಹಳ್ಳಿ, ಪಾತೂರು, ಹಿರಿಯಣ್ಣಹಳ್ಳಿ, ಕಂಡಕನಹಳ್ಳಿ, ದೊಡ್ಡಪೈಲಗುರ್ಕಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿದಿದೆ.
ಆಲಿಕಲ್ಲಿನ ಹೊಡೆತಕ್ಕೆ ನೂರಾರು ಎಕರೆಯಲ್ಲಿರುವ ದ್ರಾಕ್ಷಿ ಜತೆಗೆ ಹಿಪ್ಪುನೆರಳೆ, ಹೂವು, ದಾಳಿಂಬೆ ಮುಂತಾದ ಬೆಳೆಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.