ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿ ಗಿರಿಧಾಮದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆಯೇ ಪ್ರವಾಸಿಗರ ದಂಡು ಹರಿದು ಬಂದಿತ್ತು. ಬೈಕು, ಕಾರುಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗಿರಿಧಾಮಕ್ಕೆ ಬಂದರು. ತುಂತುರು ಮಳೆ ಪ್ರವಾಸಿಗರಿಗೆ ಮತ್ತಷ್ಟು ಮುದ ನೀಡಿತ್ತು.
ಇಡೀ ಗಿರಿಧಾಮ ಬೆಳಿಗ್ಗೆ ಮಂಜು ಹೊದ್ದು ಮಲಗಿತ್ತು. ಬೆಳಿಗ್ಗೆಯೇ ಗಿರಿಧಾಮವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು.ದ್ವಾರದಿಂದಲೇ ಪ್ರವಾಸಿಗರು ಮತ್ತು ಯುವ ಜೋಡಿಗಳು ಸಾಲುಗಟ್ಟಿದ್ದವು. ಪ್ರವೇಶದ ದ್ವಾರದಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ವಾಹನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬಂದರು.ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ 300 ಕಾರುಗಳ ನಿಲುಗಡೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ. ಇಲ್ಲಿನ ಪಾರ್ಕಿಂಗ್ ನಿಲುಗಡೆಯ ಸ್ಥಳ ತುಂಬಿ ತುಳುಕಿತ್ತು.
ಸಾಮಾನ್ಯವಾಗಿ ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಗಿರಿಧಾಮಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.