ಚಿಂತಾಮಣಿ: ರೈತರು ಮತ್ತು ರೈತ ಮಹಿಳೆಯರು ಕೌಶಲಗಳನ್ನು ಸದ್ಬಳಕೆ ಮಾಡಿಕೊಂಡು ಬೆಲೆ ಕುಸಿತದ ಸಮಯದಲ್ಲಿ ಬೆಳೆಯನ್ನು ನಾಶಪಡಿಸದೆ, ಬೀದಿಗೆ ಎಸೆಯದೆ, ವಿವಿಧ ರೀತಿಯ ಪದಾರ್ಥಗಳನ್ನು ತಯಾರು ಮಾಡಿಕೊಂಡು ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು ಎಂದು ಕೃಷಿ ಇಲಾಖೆಯ ಉಪನಿರ್ದೇಶಕಿ ಅನುರೂಪ ತಿಳಿಸಿದರು.
ತಾಲ್ಲೂಕಿನ ಕಾಗತಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿ ತಾಯಿಯನ್ನು ನಂಬಿಕೊಂಡು ರೈತರು ಜೀವನ ನಡೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಹಲವಾರು ಕಾರಣಗಳಿಂದ ಬೆಳೆ ಆಗುವುದಿಲ್ಲ. ಇಂತಹ ಸಮಯದಲ್ಲಿ ರೈತರು ಬೇಸರ, ಜಿಗುಪ್ಸೆ ಪಡದೆ ಪರ್ಯಾಯ ಆಲೋಚನೆಗಳನ್ನು ಮಾಡಬೇಕು ಎಂದು ಸೂಚಿಸಿದರು.
ಬೆಲೆ ಕುಸಿತದ ಸಮಯದಲ್ಲಿ ತಮ್ಮ ಉತ್ಪನ್ನಗಳಿಂದ ಬೇರೆ ಬೇರೆ ಪದಾರ್ಥಗಳನ್ನು ತಯಾರು ಮಾಡಲು ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ಕೊಡಲಾಗುತ್ತಿದೆ. ರೈತರ ಕುಟುಂಬಗಳು ಆರ್ಥಿಕವಾಗಿ ಬೆಳೆಯಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಆರೋಗ್ಯದ ಶಕ್ತಿ ಬರಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಬಿ.ಗಾಯಿತ್ರಿ ಮಾತನಾಡಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡಬೇಕು. ರಾಗಿ ಮತ್ತು ಉಣಸೆಯನ್ನು ಕೇವಲ ಊಟಕ್ಕಾಗಿ ಮಾತ್ರ ಉಪಯೋಗಿಸದೆ ವಿವಿಧ ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಮನೆಯಲ್ಲಿ ಮಶ್ರೂಮ್ ಬೆಳೆಸುವುದನ್ನು ಕಲಿಯಲು ಹಾಗೂ ಮಾರಾಟ ಮಾಡಲು ತರಬೇತಿ ನೀಡುತ್ತೇವೆ ಎಂದು ತಿಳಿಸಿದರು.
ಕೃಷಿ ಅಧಿಕಾರಿ ಆರ್.ವಿ.ನೇತ್ರಾವತಿ ಮಾತನಾಡಿ, ಮೊಬೈಲ್ ಆ್ಯಪ್ ಮೂಲಕ ಮುಂಗಾರು ಬೆಳೆ ಸಮೀಕ್ಷೆ ನಡೆಸಲಾಗಿದೆ. ಅದರಂತೆ ಈಗ ಹಿಂಗಾರು ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಸಮೀಕ್ಷೆಗೆ ಸಹಕರಿಸಿ. ಇದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಪ್ಪ ಮಾಡೊಳ್ಳಿ ಮಾತನಾಡಿದರು. ಉತ್ತಮ ರೈತ ಹಾಗೂ ರೈತ ಮಹಿಳೆಯರಾಗಿ ಆಯ್ಕೆಯಾಗಿದ್ದ ಆನೂರು ಗ್ರಾಮದ ಜ್ಯೋತಿ, ಬಟ್ಲಹಳ್ಳಿಗ್ರಾಮದ ಪಿ.ಆರ್.ಪ್ರಶಾಂತ್, ರೂಪ ಅವರನ್ನು ಸನ್ಮಾನಿಸಲಾಯಿತು. ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಪುಷ್ಪ, ಕೃಷಿ ಅಧಿಕಾರಿಗಳಾದ ನೇತ್ರ. ಶ್ವೇತ, ಕೃಷಿ ಆತ್ಮ ಅಧಿಕಾರಿಗಳಾದ ಸಂಧ್ಯ, ಆಶಾ, ಶಿಲ್ಪ, ಶ್ವೇತ, ಸುಷ್ಮ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.