ಚಿಕ್ಕಬಳ್ಳಾಪುರ: ‘ವಿದ್ಯೆಯೇ ಮಾನವನ ಎಲ್ಲ ರೋಗಗಳಿಗೆ ನಿಜವಾದ ಲಸಿಕೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಕಷ್ಟದ ಸಮಸ್ಯೆಗಳನ್ನು ಎದುರಿಸಲು ವಿದ್ಯೆಯಿಂದ ಮಾತ್ರ ಸಾಧ್ಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಯಲ್ಲಿಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿಯಲ್ಲಿ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸವಿತಾ ಮಹರ್ಷಿ ಅವರ ಆದರ್ಶ, ತತ್ವಗಳನ್ನು ಮೈಗೂಢಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಪ್ರಜೆಯಾಗಬಹುದು. ವಿವಿಧತೆಯಲ್ಲಿ ಏಕತೆ ಅಳವಡಿಸಿಕೊಂಡಾಗ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿವನ ದಿವ್ಯ ದೃಷ್ಟಿಯಲ್ಲಿ ಜನ್ಮ ತಾಳಿದ ಸವಿತಾ ಮಹರ್ಷಿ ಬ್ರಹ್ಮಜ್ಞಾನ ಹೊಂದಿದ್ದರು. ಅವರ ವಿಚಾರಗಳನ್ನು ಅಳವಡಿಸಿಕೊಂಡು ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದು ತಿಳಿಸಿದರು.
ವಿದ್ಯೆ ಮತ್ತು ನಿರಂತರ ಕಲಿಕೆಯ ಮೂಲಕ ಪ್ರಶ್ನಾಭಾವನೆ ಹುಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಂದಕ್ಕೂ ಪ್ರಶ್ನಿಸಿ ಸತ್ಯಾಸತ್ಯತೆ ಶೋಧಿಸುವ ಗುಣವಿರಬೇಕು ಎಂದರು.
ರಾಜ್ಯ ಸವಿತಾ ಸಮಾಜ ಸಂಘದ ಕಾರ್ಯದರ್ಶಿ ಮುನಿನಾರಾಯಣಪ್ಪ ಹಾಗೂ ಪದಾಧಿಕಾರಿಗಳಾದ ರಮೇಶ್ ಅವರು ಸವಿತಾ ಮಹರ್ಷಿ ಕುರಿತು ಉಪನ್ಯಾಸ ನೀಡಿದರು.
ಸವಿತಾ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ನಟರಾಜು, ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.