ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿ ಗಿರಿಧಾಮವು ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಭಾನುವಾರವೂ ಅಪಾರ ಸಂಖ್ಯೆಯ ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡಿದ್ದರು. ಇದರಿಂದ ಗಿರಿಧಾಮಕ್ಕೆ ಸಾಗುವ ದಾರಿಯಲ್ಲಿ ಸಂಚಾರ ದಟ್ಟಣೆ ಎದುರಾಯಿತು. ಕಿಲೋಮೀಟರ್ ಗಟ್ಟಲೆ ಕಾರುಗಳು ಸಾಲುಗಟ್ಟಿ ನಿಂತವು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಂದಿಯ ಪ್ರವೇಶ ದ್ವಾರದಲ್ಲಿ ಸಂಚಾರ ದಟ್ಟಣೆ ತೀವ್ರವಾಗಿತ್ತು. ಕಾರುಗಳಲ್ಲಿದ್ದ ಪ್ರವಾಸಿಗರು ವಾಪಸ್ ತೆರಳಲೂ ಆಗದೆ ಮುಂದೆ ಸಾಗಲೂ ಆಗದೆ ಪರದಾಡಿದರು.
ಗಿರಿಧಾಮದ ವಾಹನ ನಿಲುಗಡೆ ಸ್ಥಳದಲ್ಲಿ 300 ಕಾರುಗಳ ನಿಲುಗಡೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡುತ್ತಿದೆ. ಸಾಮಾನ್ಯ ದಿನಗಳಲ್ಲಿ ಸಂಚಾರ ದಟ್ಟಣೆಯ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕಾರು ನಿಲುಗಡೆ ಸ್ಥಳ ಭರ್ತಿಯಾದ ನಂತರ ಬೇರೆ ಕಾರುಗಳ ನಿಲುಗಡೆಗೆ ಅವಕಾಶವಿಲ್ಲ. ಗಿರಿಧಾಮಕ್ಕೆ ಹೋದ ಕಾರುಗಳು ವಾಪಸ್ ಆದ ನಂತರವೇ ಕೆಳಗೆ ಇರುವ ಕಾರುಗಳು ಗಿರಿಧಾಮಕ್ಕೆ ಹೋಗಬೇಕು.