ಚಿಕ್ಕಬಳ್ಳಾಪುರ: ಕಳೆದ ಡಿಸೆಂಬರ್ನಲ್ಲಿ ಮಧುಗಿರಿಯಲ್ಲಿ ನಡೆದ ಅಂಗವಿಕಲರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ತಾಲ್ಲೂಕಿನ ಅಂಗರೇಖನಹಳ್ಳಿ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಿ.ಟಿ.ಲಕ್ಕೇಶ ಅವರನ್ನು ಬುಧವಾರ ಶಾಲೆಯಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಆಶಾ, ‘ಲಕ್ಕೇಶ ಅವರಿಗೆ ಬೇಕಾದ ಎಲ್ಲಾ ಪೂರಕ ತರಬೇತಿಗಳನ್ನು ಕೊಡಿಸಲು ನಾವು ಬದ್ಧರಾಗಿದ್ದು, ನಿರಂತರ ತರಬೇತಿಗೆ ವ್ಯವಸ್ಥೆ ಮಾಡುತ್ತೇವೆ. ಅದೇ ರೀತಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲೂ ಗೆಲುವು ಪಡೆದುಕೊಳ್ಳಲಿ. ಇಂತಹ ವಿದ್ಯಾರ್ಥಿಗೆ ಗ್ರಾಮ ಪಂಚಾಯಿತಿ, ದಾನಿಗಳು ನೆರವಿನ ಹಸ್ತ ನೀಡಬೇಕಿದೆ’ ಎಂದು ಹೇಳಿದರು.
ಅಂಗರೇಖನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಮ್ಮ ಆಂಜನಪ್ಪ ಮಾತನಾಡಿ, ‘ಕ್ರೀಡೆಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಲಿವೆ. ಹೀಗಾಗಿ ಪೋಷಕರು ಮಕ್ಕಳನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಾಲೆ ಮತ್ತು ವಿದ್ಯಾರ್ಥಿಗೆ ಪಂಚಾಯಿತಿಯಿಂದ ಸಿಗಬಹುದಾದ ಎಲ್ಲ ನೆರವು ನೀಡಲಾಗುವುದು’ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರ ಹೊಸೂರು ಶಂಕರ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಚನ್ನಪ್ಪ, ಹಿರಿಯ ಶಿಕ್ಷಕರಾದ ರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕರಾದ ಹರ್ಷಿಯಾ ಅಂಜುಮ್, ನಾಗರತ್ನಮ್ಮ, ರಾಮಲಿಂಗಪ್ಪ, ಲಕ್ಷ್ಮೀನಾರಾಯಣ ಹಾಜರಿದ್ದರು.