ಬಾಗೇಪಲ್ಲಿ: ಪಟ್ಟಣದ ಗ್ರಂಥಾಲಯದ ಕಚೇರಿ ಆವರಣದಲ್ಲಿ ಶನಿವಾರ ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಡಾ.ಎಸ್.ಆರ್.ರಂಗನಾಥ್ ಅವರ 131ನೇ ದಿನಾಚರಣೆಯ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾರಾಯಣಪ್ಪ ಮಾತನಾಡಿ, ‘ಆಧುನಿಕ ತಂತ್ರಜ್ಞಾನದಲ್ಲಿ ಪುಸ್ತಕಗಳನ್ನು ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಮಾಡುತ್ತಿಲ್ಲ. ಪ್ರತಿಯೊಬ್ಬರು ಗ್ರಂಥಾಲಯಕ್ಕೆ ಹೋಗಿ ಪುಸ್ತಕ, ದಿನಪತ್ರಿಕೆ ಹಾಗೂ ವಿಷಯಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಅಂತರ್ಜಾಲದಲ್ಲಿ ಅನೇಕ ಮಾಹಿತಿಗಳನ್ನು ಪ್ರಕಟಿಸಲಾಗಿದೆ. ಒಳ್ಳೆಯ ವಿಷಯಗಳನ್ನು ಓದಬೇಕು. ಪುಸ್ತಕಗಳ ಮೌಲ್ಯ ಮತ್ತು ಸಾರ್ಥಕ ಪಡೆಯಬೇಕಾದರೆ ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು. ಗ್ರಾಮೀಣ ಮಟ್ಟದಲ್ಲಿನ ಗ್ರಂಥಾಲಯಗಳನ್ನು ಉತ್ತಮವಾಗಿ ಬಲಪಡಿಸಬೇಕು ಎಂದರು.
ತಾಲ್ಲೂಕು ಕೇಂದ್ರ ಗ್ರಂಥಾಲಯದಿಂದ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗಣ್ಯರು ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದರು. ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುಸ್ತಕ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಂಥಾಲಯದಲ್ಲಿನ ದಿನಪತ್ರಿಕೆಗಳ ಹಾಗೂ ಪುಸ್ತಕಗಳಿಂದ ಓದಿ ಉತ್ತಮ ಹುದ್ದೆಗಳನ್ನು ಗಳಿಸಿದ ಮೌಲಾಲಿ, ಶಶಿಕುಮಾರ್, ಶಿವಾನಂದ ಹಾಗೂ ಕಾವ್ಯ ಅವರನ್ನು ಗೌರವಿಸಲಾಯಿತು.
ಮುಖ್ಯಶಿಕ್ಷಕ ಕೆ.ವಿ.ಆದಿನಾರಾಯಣ, ಶಿಕ್ಷಣ ಅಧಿಕಾರಿ ಎನ್.ಶಿವಪ್ಪ, ಮುಖಂಡ ಪಿ.ಮಂಜುನಾಥರೆಡ್ಡಿ, ಶ್ರೀರಾಮನಾಯಕ್, ಬಿ.ಆಂಜನೇಯರೆಡ್ಡಿ, ಚಂದ್ರಶೇಖರ್, ಗ್ರಂಥಪಾಲಕ ಕೃಷ್ಣಾಗೌಡ ಇದ್ದರು.