ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ನಿಡುಮಾಮಿಡಿ ಮಠದ ಶೋಷಣೆ: ಸ್ವಾಮೀಜಿ ಆರೋಪ

ವೀರಭದ್ರ ಚನ್ನಮಲ್ಲ ಸ್ವಾಮೀಜಿ ಗಂಭೀರ ಆರೋಪ
Last Updated 5 ಏಪ್ರಿಲ್ 2021, 8:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶೋಷಿತರು, ದುರ್ಬಲರ, ಬಡವರ ಪರವಾಗಿ ಹೋರಾಟ ನಡೆಸಿದ ನಿಡುಮಾಮಿಡಿ‌ ಮಠವನ್ನೇ ಜಿಲ್ಲಾಡಳಿತ ಶೋಷಿಸುತ್ತಿದೆ ಎಂದು ಮಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಇಲ್ಲಿನ ಜಿಲ್ಲಾಡಳಿತದಿಂದ ಪೀಠಕ್ಕೆ ಎಷ್ಟು ಸಹಕಾರ ಸಿಗಬೇಕೊ ಅಷ್ಟು ಸಹಕಾರ ಸಿಕ್ಕಿಲ್ಲ ಎನ್ನುವುದೇ ನಮ್ಮ ನೋವು ಮತ್ತು ಬೇಸರ ಎಂದರು.

ದಾಖಲೆಗಳನ್ನು ಸಲ್ಲಿಸಿದ್ದರೂ 28 ವರ್ಷಗಳಿಂದ ನಮ್ಮ ಮಠಕ್ಕೆ ವರ್ಷಾಸನ ನಿಗದಿ ಮಾಡಿಲ್ಲ. ಜಮೀನುಗಳ ಹಕ್ಕುದಾರಿಕೆಯ ವಿಷಯ ಇತ್ಯರ್ಥ ಮಾಡಿಲ್ಲ. ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಡಳಿತ ಮತ್ತು ಚಿಕ್ಕಬಳ್ಳಾಪುರ ತಹಶಿಲ್ದಾರರಿಗೆ ಪತ್ರದ ಮೂಲಕ ಮನವಿ‌ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿರುವ ನಿಡುಮಾಮಿಡಿ ಮಠಕ್ಕೆ ತಹಸೀಲ್ ಹಣ 2008ರಿಂದ ಬಿಡುಗಡೆಯಾಗಿಲ್ಲ. ಈ ಬಗ್ಗೆ ಪತ್ರ ಬರೆದರೂ ತಹಶಿಲ್ದಾರರು ನಿಷ್ಕಾಳಜಿ ತೋರುತಿದ್ದಾರೆ ಎಂದರು. ವಾಪಸಂದ್ರದಲ್ಲಿ ನಮ್ಮ ಮಠಕ್ಕೆ ಸೇರಿರುವ ಸ.ನಂ 174ರಲ್ಲಿನ ಬಿ ಖರಾಬು 9 ಗುಂಟೆಯನ್ನು ಮಠಕ್ಕೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೆ ಪತ್ರ ಬರೆದೆವು. ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ಸಹ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.‌ ಇದಕ್ಕೂ ಜಿಲ್ಲಾಡಳಿತ ಸ್ಪಂದಿಸಿಲ್ಲ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಮಠಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಸರ್ಕಾರದಿಂದ ಹಣ ನೀಡಿದ್ದಾರೆ. ಆ ಹಣವನ್ನು ನಮಗೆ ಕೊಟ್ಟಿಲ್ಲ. ಅದರಲ್ಲಿ ಒಂದು ಭಾಗವನ್ನು ಬೇರೆ ಕಾರ್ಯಕ್ಕೆ ನೀಡಿದ್ದಾರೆ. ಮುಮ್ತಾಜ್ ಅಲಿಖಾನ್ , ಮೋಟಮ್ಮ ಸಚಿವರಾಗಿದ್ದಾಗ ಮಠದ ಶಾಲಾ ಕಾಲೇಜಿನ ಅಭಿವೃದ್ಧಿಗೆ ಅನುದಾನ ನೀಡಿದ್ದರು. ಆದರೆ ಆ ಅನುದಾನವನ್ನು ಜಿಲ್ಲಾಡಳಿತ ನೀಡಲೇ ಇಲ್ಲ ಎಂದು ಆರೋಪಿಸಿದರು.

ನಿಡುಮಾಮಿಡಿ ಪೀಠಕ್ಕೆ ಪ್ರಾಚೀನ ಪರಂಪರೆ ಇದೆ‌. ನಾನು 40ನೇ ಪೀಠಾಧೀಪತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಈ ಪೀಠ, ಸಂಸ್ಥೆಗೆ ನ್ಯಾಯಬದ್ಧ ವಾಗಿ ಇರುವ ಕೆಲಸಗಳನ್ನೂ ಮಾಡಿಕೊಡುತಿಲ್ಲ. ಸಾಮಾನ್ಯವಾಗಿ ಇತರೆ ಕಡೆಗಳಲ್ಲಿ ಪ್ರಾಚೀನ ಮಠಗಳ ಮಠಾಧೀಶರನ್ನು ಆ ಜಿಲ್ಲೆಗಳ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾಡಳಿತಗಳು ಸಕ್ರಿಯವಾಗಿ ಬಳಸಿಕೊಳ್ಳುತ್ತಿವೆ. ಆದರೆ ಇಲ್ಲಿ ಮಠವನ್ನು ಪರೋಕ್ಷವಾಗಿ ದಮನ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.

ನಮ್ಮ ಮಠದ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಕೆಲವು ಒಳ್ಳೆಯ ಅಧಿಕಾರಿಗಳು ಬಂದು ಹೋಗಿದ್ದಾರೆ. ಜಿಲ್ಲೆಯ ಜನರ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಎಲ್ಲರಲ್ಲೂ ಆ ಹೃದಯವಂತಿಕೆ ಇಲ್ಲ. ಪ್ರಜ್ಞಾಪೂರ್ವಕವಾಗಿ ಮಠದ ಬಗ್ಗೆ ಪಕ್ಷಪಾತ ಮಾಡುತಿದ್ದಾರೆ. ತಾರತಮ್ಯ ಮಾಡುತಿದ್ದಾರೆ. ನಾವು ಅಸ್ತಿ ಮಾಡಿಕೊಂಡು ಅನುಭವಿಸಲು ಹೆಂಡತಿ ಮಕ್ಕಳು ಇಲ್ಲ. ನಮಗೆ ಸಹಕಾರ ನೀಡದೆ ಮತ್ತೆ ಇನ್ನು ಯಾರಿಗೆ ಇವರು ಸಹಕಾರ ನೀಡಬೇಕು ಎಂದುಕೊಂಡಿದ್ದಾರೆ. ಯಾವ ಉದ್ದೇಶದಿಂದ ನಮಗೆ ಅನ್ಯಾಯ ಮಾಡುತಿದ್ದೀರಿ? ಜಿಲ್ಲಾಡಳಿತ ಸ್ಪಂದಿಸದಿದ್ದರೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ಈ ಬಗ್ಗೆ ದೂರು ನೀಡುವೆ. ಹೋರಾಟದ ಮಾರ್ಗದಲ್ಲಿ ಸಾಗುವೆ ಎಂದರು.

ಶೋಷಣೆಯ, ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದವನ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಡೀ ಜಿಲ್ಲೆಯಲ್ಲಿ ಏಕೈಕ ಲಿಂಗವಂತರ ಮಠ ಇದು. ಪರಿಶಿಷ್ಟರು, ಶೋಷಿತರ ಪರವಾಗಿ ಕಾಳಜಿ ಹೊಂದಿರುವುದು ಇಲ್ಲಿನ ಪ್ರಬಲ ಸಮುದಾಯಗಳ ಕೆಲವು ರಾಜಕೀಯ ಮುಖಂಡರಿಗೆ ಮತ್ತು ಕೆಲವು ಅಧಿಕಾರಿಗಳಿಗೆ ಸೈರಣೆ ಇಲ್ಲ. ಲಿಂಗಾಯತರ ಮಠವೊಂದು ಇಲ್ಲಿ ಬೆಳೆಯಬಾರದು ಎಂಬ ಅಸಹನೆಯನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದರು.

ಮಠವನ್ನು, ಮಠದ ಶಾಲಾ ಕಾಲೇಜುಗಳನ್ನು ಹತ್ತಿಕ್ಕುವ ಸಂಚು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT