ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ತಿಂಗಳಿಗೊಮ್ಮೆ ನಡೆಯದ ಸಚಿವರ ‘ಜನತಾ ದರ್ಶನ’

Published 7 ಡಿಸೆಂಬರ್ 2023, 5:28 IST
Last Updated 7 ಡಿಸೆಂಬರ್ 2023, 5:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಸೂಕ್ತ ಪರಿಹಾರ ಒದಗಿಸಲು ಪ್ರತಿ ತಿಂಗಳು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ‘ಜನತಾ ದರ್ಶನ’ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. 

ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ಸಹ ನೀಡಿದ್ದರು. ಸೆ. 25ರಂದು ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯಾ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳನ್ನು ಸೇರಿಸಿಕೊಂಡು ಜನತಾ ದರ್ಶನ ಹಮ್ಮಿಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. 

ಆ ಪ್ರಯುಕ್ತ ಸೆ.25ರಂದು ಚಿಕ್ಕಬಳ್ಳಾಪುರ ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ‘ಜನತಾ ದರ್ಶನ’ ನಡೆಸಿದ್ದರು. ಆದರೆ ನಂತರದ ತಿಂಗಳುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಮತ್ತೆ ಜನತಾ ದರ್ಶನ ನಡೆಸಿಲ್ಲ. ಒಂದೇ ತಿಂಗಳಿಗೆ ಸೀಮಿತವಾಯಿತೇ ಸಚಿವರ ಜನತಾ ದರ್ಶನ ಎಂದು ವಿರೋಧ ಪಕ್ಷಗಳ ಮುಖಂಡರು ಟೀಕಿಸುತ್ತಿದ್ದಾರೆ. 

ಅಕ್ಟೋಬರ್, ನವೆಂಬರ್‌ನಲ್ಲಿ ಸಚಿವರ ‘ಜನತಾ ದರ್ಶನ’ ನಡೆದಿಲ್ಲ. ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ.  

ಆಯಾ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಮನ್ವಯ ಸಾಧಿಸಿ ಜನತಾ ದರ್ಶನಕ್ಕೆ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ಜಿಲ್ಲಾಡಳಿತವು ಆಯಾ ಜಿಲ್ಲೆಯ ಜನರಿಗೆ ಜನತಾ ದರ್ಶನ ನಡೆಯುವ ಸ್ಥಳ, ಸಮಯ ಇತ್ಯಾದಿ ಮಾಹಿತಿಯನ್ನು ಜಾಹೀರಾತು ಮೂಲಕ ಮೊದಲೇ ನೀಡಬೇಕು ಎಂದು ಮುಖ್ಯಮಂತ್ರಿ ಈ ಹಿಂದೆ ಸೂಚಿಸಿದ್ದರು. 

ಆ ಸೂಚನೆಯ ಪ್ರಕಾರ ಸೆ.25ರಂದು ಜಿಲ್ಲಾ ಕೇಂದ್ರದಲ್ಲಿ ನಡೆದ ಸಚಿವರ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ, ಡಿಸಿ, ಎಸ್ಪಿ, ಜಿ.ಪಂ ಸಿಇಒ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಸಹ ಭಾಗವಹಿಸಿದ್ದರು. 

ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು 6 ಕೌಂಟರ್‌ಗಳನ್ನು ತೆರೆಯಲಾಗಿತ್ತು. ಒಟ್ಟು 237 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಸ್ವೀಕೃತ ಅರ್ಜಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಶೇ 30ರಷ್ಟು ಅಂದರೆ 65ಕ್ಕೂ ಹೆಚ್ಚು ಅರ್ಜಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂದಿಸಿದಂತೆ 32 ಅರ್ಜಿಗಳು ಬಂದಿದ್ದವು.

ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಲಾಯಿತು. ಅಂಗವಿಲಕರು, ವೃದ್ಧರು, ಅಶಕ್ತರು ಮತ್ತು ಮಹಿಳೆಯರು ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದರು. ಹೀಗೆ ಸಾಮಾನ್ಯ ಜನರು ಸಹ ಸಚಿವರನ್ನು ನೇರವಾಗಿ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಜನತಾ ದರ್ಶನದಲ್ಲಿ ಅವಕಾಶವಿದೆ. ಇದು ಜನರಿಗೆ ಹೆಚ್ಚು ಅನುಕೂಲವಾಗಿದೆ. 

ಸಾಮಾನ್ಯ ಜನರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಆಗಬೇಕು ಎಂದರೆ, ರಾಜಕೀಯ ನಾಯಕರು ಅಥವಾ ಪ್ರಭಾವಿಗಳನ್ನು ಆಶ್ರಯಿಸಬೇಕು. ಆದರೆ ಜನತಾ ದರ್ಶನದಲ್ಲಿ ನೇರವಾಗಿ ಸಚಿವರಿಗೆ ತಮ್ಮ ಅಹವಾಲನ್ನು ಜನರು ಸಲ್ಲಿಸಬಹುದು. ಇಂತಹ ಮಹತ್ವದ ಕಾರ್ಯಕ್ರಮ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಜಿಲ್ಲೆಯ ಹೋರಾಟಗಾರರು.

‘ತಪ್ಪದಿರಲಿ ಸಚಿವರ ದರ್ಶನ’

ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರು ಜನತಾ ದರ್ಶನ ನಡೆಸುವುದರಿಂದ ರೈತರು ಜನಸಾಮಾನ್ಯರು ಯಾವ ರೀತಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎನ್ನುವುದು ಅವರ ಅರಿವಿಗೆ ಬರಲಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನವನ್ನು ಸಚಿವರು ನಡೆಸುವುದನ್ನು ಬಿಡಬಾರದು ಎಂದು ಚಿಕ್ಕಬಳ್ಳಾಪುರ ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಗೋಪಾಲ್ ಆಗ್ರಹಿಸುವರು. ಎಲ್ಲರೂ ಸಚಿವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಜನತಾ ದರ್ಶನ ಮಾಡಿದರೆ ಸಮಸ್ಯೆಗಳುಳ್ಳ ಜನರು ಇಲ್ಲಿಗೆ ಬಂದು ಸಮಸ್ಯೆಯ ಬಗ್ಗೆ ತಿಳಿಸುವರು ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT