ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕಾರ್ಯಕ್ರಮ: ಕೂಲಿ ಹಣ ನೀಡಿ; ಬಿಜೆಪಿ ಮುಖಂಡರಿಗೆ ಕಾರ್ಮಿಕರ ದುಂಬಾಲು

ಪ್ರಗತಿಯ ಪ್ರತಿಮೆ ಅನಾವರಣ; ಕಾರ್ಮಿಕರಿಗೆ ಸಿಗದ ಕೂಲಿ– ಆರೋಪ
Last Updated 12 ನವೆಂಬರ್ 2022, 14:35 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಬೆಂಗಳೂರಲ್ಲಿ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಕೂಲಿ ಮತ್ತು ಊಟ ಕೊಡಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸ್ಥಳೀಯ 40 ಕೂಲಿ ಕಾರ್ಮಿಕರನ್ನು ಬಿಜೆಪಿ ಮುಖಂಡರು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿದ ಬಳಿಕ ವಾಪಸ್ಬರುವ ವೇಳೆ ₹ 500 ನೀಡುವುದಾಗಿ ಭರವಸೆ ನೀಡಿದ್ದರು. ಇನ್ನೂ ಹಣ ನೀಡಿಲ್ಲ. ಕಾರ್ಯಕ್ರಮದಲ್ಲಿ ಕನಿಷ್ಠ ಪಕ್ಷ ನೀರು ಮತ್ತು ಊಟವನ್ನು ಕೊಡಲಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

40 ಕ್ಕೂ ಹೆಚ್ಚು ಕಾರ್ಮಿಕರು ಶನಿವಾರ ಬೆಳಿಗ್ಗೆ ನಗರದಲ್ಲಿನ ಬಿಜೆಪಿ ಮುಖಂಡರೊಬ್ಬರ ಮನೆ ಬಾಗಿಲು ತಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಮುಖಂಡ ಅದು ಸರ್ಕಾರಿ ಕಾರ್ಯಕ್ರಮ. ಅಲ್ಲಿ ಯಾರು ಯಾರಿಗೂ ಹಣ ಕೊಟ್ಟಿಲ್ಲ. ಹಣ ಕೇಳಿದರೆ ಪೊಲೀಸರಿಗೆ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಕೂಲಿ ಕಾರ್ಮಿಕರು ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಯಾರ ವಿರುದ್ಧ ಏನೆಂದು ದೂರು ಕೊಡಬೇಕು ಎಂದು ತಿಳಿಯದೆ ಅಲ್ಲೇ ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿದ್ದರು. ಪೊಲೀಸರೂ ಸಹ ಅವರನ್ನು ಕಳಿಹಿಸಿದ್ದಾರೆ.

ಕಾರ್ಮಿಕರು ತಮಗೆ ತಿಳಿದಿರುವ ಬಿಜೆಪಿ ಮುಖಂಡರ ಮನೆ ಬಾಗಿಲು ಬಡಿಯತೊಡಗಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ಇರಿಸು ಮುರುಸಿಗೆ ಕಾರಣವಾಗಿದೆ. ಜತೆಗೆ ಮೋದಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆದೊಯ್ಯುವ ವ್ಯವಸ್ಥೆಯ ಹೊಣೆ ಹೊತ್ತಿದ್ದವರ ನಡುವೆ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ. ಕೊನೆಗೂ ತಲಾ ₹ 200 ನೀಡಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT