ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ದಂಡ

ನಗರದಲ್ಲಿ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದವರಿಗೆ ದಂಡ ವಿಧಿಸಿ, ಬಟ್ಟೆ ಕೈಚೀಲ ವಿತರಿಸಿದ ಜಿಲ್ಲಾಧಿಕಾರಿ, ಎಸ್‌ಪಿ
Last Updated 1 ಆಗಸ್ಟ್ 2019, 14:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಅವರು ಗುರುವಾರ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದ ಪಾದಚಾರಿಗಳಿಗೆ ದಂಡ ವಿಧಿಸಿ, ಬಟ್ಟೆ ಕೈಚೀಲ ನೀಡಿ ಬಳಸುವಂತೆ ಸಲಹೆ ನೀಡಿದರು.


ನಗರದ ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ ಈ ಇಬ್ಬರು ಅಧಿಕಾರಿಗಳು ಅಂಗಡಿಗಳಿಂದ ಪ್ಲಾಸ್ಟಿಕ್ ಕೈಚೀಲದಲ್ಲಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಪಾದಚಾರಿಗಳಿಗೆ ಹಾಗೂ ಪ್ಲಾಸ್ಟಿಕ್ ಕೈಚೀಲ ನೀಡಿದ ಅಂಗಡಿ ಮಾಲೀಕರಿಗೆ ₹200 ದಂಡ ವಿಧಿಸಿದರು. ದಂಡ ಪಾವತಿಸಿದವರಿಗೆ ಬಟ್ಟೆ ಕೈಚೀಲಗಳನ್ನು ವಿತರಿಸಿದರು.


ಈ ವೇಳೆ ಮಾತನಾಡಿದ ಅನಿರುದ್ಧ್ ಶ್ರವಣ್, ‘2016ರಿಂದ ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಈ ಕುರಿತು ಈಗಾಗಲೆ ಜಿಲ್ಲೆಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ನಾಗರಿಕರು ಅರಿವಿಲ್ಲದಂತೆ ಪ್ಲಾಸ್ಟಿಕ್ ಬಳಕೆಯನ್ನು ಹೆಚ್ಚೆಚ್ಚು ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗುರುವಾರದಿಂದ (ಆ.1) ಕಟ್ಟುನಿಟ್ಟಾಗಿ ದಂಡ ಹಾಕುವುದಾಗಿ ಮೊದಲೇ ಘೋಷಣೆ ಮಾಡಿದ್ದೆವು’ ಎಂದು ಹೇಳಿದರು.


‘ಪ್ರಥಮ ಹಂತವಾಗಿ ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಪ್ಲಾಸ್ಟಿಕ್ ಕೈಚೀಲ ಕೊಂಡೊಯ್ಯುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಯಾವುದೇ ರೀತಿಯಾ ಪ್ಲಾಸ್ಟಿಕ್ ಲೋಟ, ಚಮಚ, ತಟ್ಟೆ ಇವುಗಳನ್ನು ಬಳಕೆ ಮಾಡಬಾರದು. ಬಳಕೆ ಮಾಡಿದವರಿಗೆ ತಲಾ ₹200 ದಂಡ ವಿಧಿಸಲಾಗುವುದು. ಸಾರ್ವಜನಿಕರು ಕೂಡ ಎಲ್ಲಿಯಾದರೂ ಪ್ಲಾಸ್ಟಿಕ್ ಬಳಕೆ ಮಾಡುವುದು ಗಮನಕ್ಕೆ ಬಂದರೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು. ನಗರಸಭೆ ಆಯುಕ್ತ ಉಮಾಕಾಂತ್ ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT