ಚಿಕ್ಕಬಳ್ಳಾಪುರ: ಜಿಲ್ಲೆಯ ಎಂಟು ಕೇಂದ್ರಗಳಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸುಸೂತ್ರವಾಗಿ ಆರಂಭಗೊಂಡಿತು. ಮೊದಲ ದಿನ 2,461 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಅನುತೀರ್ಣಗೊಂಡವರ ಪೈಕಿ ಪೂರಕ ಪರೀಕ್ಷೆಗೆ 5,053 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ದಿನ ನಡೆದ ಸಮಾಜ ಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡ 452 ವಿದ್ಯಾರ್ಥಿಗಳ ಪೈಕಿ 403 ಜನ ಪರೀಕ್ಷೆಗೆ ಹಾಜರಾದರೆ 49 ವಿದ್ಯಾರ್ಥಿಗಳು ಗೈರಾದರು.
ಲೆಕ್ಕಶಾಸ್ತ್ರ ಪರೀಕ್ಷೆಗೆ ನೋಂದಾಯಿಸಿಕೊಂಡವರ (1,233) ಪೈಕಿ 1,118 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು. 115 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ. ಗಣಿತ ಪರೀಕ್ಷೆಗೆ ನೋಂದಾಯಿಸಿಕೊಂಡ 1,004 ಜನರ ಪೈಕಿ 940 ವಿದ್ಯಾರ್ಥಿಗಳು ಹಾಜರಾದರು. 64 ಅಭ್ಯರ್ಥಿಗಳು ಗೈರಾದರು.
ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ 2,864 ಬಾಲಕರು, 2,189 ಬಾಲಕಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆ ಪೈಕಿ ಕಲಾ ವಿಭಾಗದಲ್ಲಿ 1,551, ವಾಣಿಜ್ಯ ವಿಭಾಗದಲ್ಲಿ 2,117, ವಿಜ್ಞಾನ ವಿಭಾಗದಲ್ಲಿ 1,385 ವಿದ್ಯಾರ್ಥಿಗಳಿದ್ದಾರೆ.
ಚಿಂತಾಮಣಿ ತಾಲ್ಲೂಕಿನಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಚಿಕ್ಕಬಳ್ಳಾಪುರದಲ್ಲಿ ಪಂಚಗಿರಿ ಪದವಿ ಪೂರ್ವ ಕಾಲೇಜು , ಸರ್ಕಾರಿ ಪದವಿ ಪೂರ್ವ ಕಾಲೇಜು, ಶಿಡ್ಲಘಟ್ಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೌರಿಬಿದನೂರಿನಲ್ಲಿ ಎಸ್ಎಸ್ಇಎ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಗೇಪಲ್ಲಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳು ತೆರೆಯಲಾಗಿದೆ.
ಪರೀಕ್ಷೆಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳ ಮುಚ್ಚಲು ಆದೇಶಿಸಿದೆ.