ಚಿಂತಾಮಣಿ: ಚಾಲಕರು ವಾಹನಗಳಲ್ಲಿ ಕುಳಿತು ಚಾಲನೆಗೆ ಮೊದಲು ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಂಡು ನಂತರ ಚಾಲನೆ ಆರಂಭಿಸಬೇಕು ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯತ್ರಣಾಧಿಕಾರಿ ಬಸವರಾಜ್ ಸಲಹೆ ನೀಡಿದರು.
ನಗರದ ವಿಜಯಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಕರ್ನಾಟಕ ರಸ್ತೆ ಸುರಕ್ಷತಾ ಸಂಘದ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಂಪಾದನೆ ಸೇರಿದಂತೆ ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.
ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಅರಿತುಕೊಳ್ಳಬೇಕು. ಚಾಲನೆಯಲ್ಲಿ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರದೆ ಭಯ, ಭಕ್ತಿಯಿಂದ ಚಾಲನೆ ಮಾಡಬೇಕು. ದ್ವಿಚಕ್ರವಾಹನಗಳ ಸವಾರರು ಹೆಲ್ಮೆಟ್ ಧರಿಸಿರಬೇಕು. ಹಲವಾರು ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಸಾವಿಗೀಡಾಗಿದ್ದಾರೆ. ಹೆಲ್ಮೆಟ್ ಧರಿಸಿದವರು ಸಾವಿನಿಂದ ಬಚಾವಾಗಿರುವ ಪ್ರಕರಣಗಳು ಸಾಕಷ್ಟಿವೆ. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದಕುಮಾರ್, ಗ್ರಾಮಾಂತರ ಠಾಣೆಯ ಎ.ಎಸ್.ಐ ನಾರಾಯಣಸ್ವಾಮಿ ಮಾತನಾಡಿದರು.
ರೈತ ಸಂಘಟನೆಯ ಮುಖಂಡರಾದ ಸೀಕಲ್ ರಮಣಾರೆಡ್ಡಿ, ಜೆ.ವಿ. ರಘುನಾಥರೆಡ್ಡಿ, ವೆಂಕಟರಾಮಯ್ಯ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಗಲಗುರ್ಕಿ ಚಲಪತಿ, ಸಾರಿಗೆ ಸಂಸ್ಥೆಯ ನಗರ ಘಟಕದ ಅಧ್ಯಕ್ಷ ಅಪ್ಪಿರೆಡ್ಡಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜಪ್ಪ, ಮುನೇಶ್, ಮುತ್ತಪ್ಪ ಭಾಗವಹಿಸಿದ್ದರು.