ಚಿಂತಾಮಣಿ: ಕೊರೊನಾದೊಂದಿಗೆ ಜೀವನ ನಡೆಸುವುದು ಅನಿವಾರ್ಯ ವಾಗಿದೆ. ಜನರು ಎಚ್ಚೆತ್ತು ಮಾರ್ಗದರ್ಶಿ ಸೂಚನೆಗಳನ್ನು ಪಾಲಿಸುವ ಮೂಲಕ ಸಮುದಾಯಕ್ಕೆ ಕೊರೊನಾ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ತಾಲ್ಲೂಕು ಕೊರೊನಾ ನೋಡಲ್ ಅಧಿಕಾರಿ ಎಂ.ಎನ್.ರಘು ಮನವಿ ಮಾಡಿದರು.
ನಗರದ ಎಪಿಎಂಸಿ ಮಾರುಕಟ್ಟೆ ಯಲ್ಲಿ ಭಾನುವಾರ ಮುಖಗವಸು ಧರಿಸದೆ ಹಾಗೂ ಅಂತರ ಕಾಯ್ದುಕೊಳ್ಳ ದವರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರ ಉದಾಸೀನದಿಂದ ಕೊರೊನಾ ವ್ಯಾಪಕವಾಗಿ ಹರಡಲು ಕಾರಣವಾಗುತ್ತಿದೆ. ಸಮುದಾಯಕ್ಕೆ ಹರಡಂತೆ ನಿಯಂತ್ರಿಸುವ ಜವಾಬ್ದಾರಿ ಯನ್ನು ನಾಗರಿಕರು ವಹಿಸಿಕೊಳ್ಳಬೇಕು. ಅಕಸ್ಮಾತ್ ಸಮುದಾಯಕ್ಕೆ ಹರಡಿದರೆ ವೃದ್ಧರು, ಮಕ್ಕಳು ಹಾಗೂ ಬೇರೆ ಬೇರೆ ಕಾಯಿಲೆ ಉಳ್ಳವರು ತೊಂದರೆಗೆ ಒಳಗಾಗುತ್ತಾರೆ. ಕೊರೊನಾ ನಿಯಂತ್ರಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ‘ಮಾರುಕಟ್ಟೆಗೆ ವಿವಿಧ ರಾಜ್ಯಗಳಿಂದ ವರ್ತಕರು, ಚಾಲಕರು, ಕೆಲಸಗಾರರು ಬರುತ್ತಾರೆ. ವಾಹನಗಳನ್ನು ಕಡ್ಡಾಯವಾಗಿ ಸ್ಯಾನಿಟೈಜರ್ ಮಾಡಿಸಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಹೆಚ್ಚು ಜನರು ಸೇರುವುದರಿಂದ ಅಂತರ ಕಾಪಾಡುವುದು ಬಹು ಮುಖ್ಯ. ವ್ಯಾಪಾರಿಗಳು, ಏಜೆಂಟರು ತಮ್ಮ ಸಿಬ್ಬಂದಿಗೆ ಕೊರೊನಾ ಸೋಂಕಿನ ಬಗ್ಗೆ ಸದಾ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಮಂಜುನಾಥ ರೆಡ್ಡಿ ಮಾತನಾಡಿ, ‘ಬಡವರಿಗೆ ಉಚಿತವಾಗಿ ಮಾಸ್ಕ್ಗಳನ್ನು ನೀಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಬರುವ ವಾಹನಗಳ ಚಾಲಕರು ಅನವಶ್ಯಕವಾಗಿ ತಿರುಗಾಡದೆ ತಮ್ಮ ವಾಹನಗಳಲ್ಲಿಯೇ ಉಳಿಯಬೇಕು. ಕೊರೊನಾ ಲಕ್ಷಣಗಳು ಕಂಡುಬಂದರೆ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು.
ಎಪಿಎಂಸಿ ಕಾರ್ಯದರ್ಶಿ ಆರ್.ಉಮಾ, ಸಹಾಯಕ ಕಾರ್ಯದರ್ಶಿ ಮಂಜುನಾಥ್, ಕೊರೊನಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಾದ ಎನ್.ಲಕ್ಷ್ಮಿಕುಮಾರ್, ಶ್ರೀನಿವಾಸ್, ನಿರ್ಮಲಾ, ವೆಂಕಟೇಶ್, ಸುನಿಲ್ ಇದ್ದರು.