ಬಾಗೇಪಲ್ಲಿ: ಕವಿ, ಸಾಹಿತಿ ದಿ. ಡಾ.ಸಿದ್ಧಲಿಂಗಯ್ಯ ಅವರ ಹೋರಾಟದ ಜ್ಞಾನ ಸಂಪತ್ತನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಹಸಂಘಟನಾ ಸಂಚಾಲಕ ಬಿ.ವಿ.ವೆಂಕಟರವಣ ಕರೆ ನೀಡಿದರು.
ಪಟ್ಟಣದ ಡಾ.ಅಂಬೇಡ್ಕರ್ ಪುತ್ಥಳಿ ಮುಂದೆ ಶನಿವಾರ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ದಿ.ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ಧಲಿಂಗಯ್ಯ ಕೇವಲ ದಲಿತ ಕವಿ ಆಗಿರಲಿಲ್ಲ. ಎಲ್ಲ ಸಮುದಾಯಗಳ ಹರಿಕಾರರಾಗಿದ್ದರು. ಅಂಬೇಡ್ಕರ್ ಜೀವನದ ಆದರ್ಶಗಳನ್ನು ರೂಢಿಸಿಕೊಂಡು, ಸಾಮಾಜಿಕ, ಬಡಜನರ ಬಗ್ಗೆ ಚಿಂತಕರಾಗಿದ್ದರು. ಕವಿ, ಸಾಹಿತಿಗಳಾಗಿ ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಲಕ್ಷ್ಮಿನರಸಿಂಹಪ್ಪ, ಮುಖಂಡ ಚಿನ್ನಪೂಜಪ್ಪ, ಪೈಪಾಳ್ಯರವಿ, ಗಂಗುಲಪ್ಪ, ಕೋಟಪ್ಪ, ಜಯಂತ್, ನರಸಿಂಹಪ್ಪ, ಜೀವಿಕಾ ಸಂಘಟನೆಯ ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ ಇದ್ದರು.