ಚಿಂತಾಮಣಿ: ಕೈವಾರದ ಯೋಗಿನಾರೇಯಣ ಮಠದಲ್ಲಿ ರಥೋತ್ಸವವು ಸೋಮವಾರ ಶ್ರದ್ಧಾಭಕ್ತಿಗಳಿಂದ ನೆರವೇರಿತು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ರಥೋತ್ಸವವನ್ನು ಮಠದ ಒಳ ಆವರಣದಲ್ಲಿ ಸರಳ ವಾಗಿ ನೆರವೇರಿಸಲಾಯಿತು.
ರಥೋತ್ಸವದ ಅಂಗವಾಗಿ ಸದ್ಗುರು ತಾತಯ್ಯನವರ ಮೂಲ ಜೀವಸಮಾಧಿ ಬೃಂದಾವನವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಉತ್ಸವ ವಿಗ್ರಹವನ್ನು ಪೀಠದಲ್ಲಿ ಆಸೀನ ಮಾಡಿಸಿ, ಪಂಚಾಮೃತ ಹಾಗೂ ಮಂಗಳದ್ರವ್ಯಗಳಿಂದ ಅಭಿಷೇಕವನ್ನು ಸಮರ್ಪಿಸಲಾಯಿತು. ನಂತರ ವಿವಿಧ ಬಗೆಯ ಹೂಗಳಿಂದ ಅಲಂಕಾರವನ್ನು ಮಾಡಿ ಅಷ್ಟಾವಧಾನ ಸೇವೆಯನ್ನು ನೆರವೇರಿಸಲಾಯಿತು. ರಥೋತ್ಸವದ ಪ್ರಯುಕ್ತ ರಥಕ್ಕೆ ಬಲಿಹರಣ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು.
ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಕ್ತರು ತೇರುಬಾಳೆಯನ್ನು ರಥಕ್ಕೆ ಅರ್ಪಿಸಿ ಹರಿಕೆ ಸಲ್ಲಿಸಿದರು. ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ವಿಶೇಷ ಉಪನ್ಯಾಸ ನೀಡಿದರು.