ಚಿಕ್ಕಬಳ್ಳಾಪುರ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ವಾರಸುದಾರರಿಲ್ಲದ ನಾಲ್ಕು ಅನುಮಾನಾಸ್ಪದ ಬ್ಯಾಗ್ಗಳು ಪತ್ತೆಯಾಗಿ, ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಬ್ಯಾಗ್ ವಿಚಾರ ತಿಳಿಯುತ್ತಿದ್ದಂತೆ ಶ್ವಾನದಳದೊಂದಿಗೆ ನಿಲ್ದಾಣಕ್ಕೆ ದೌಡಾಯಿಸಿದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ದೂರ ಕಳುಹಿಸಿ, ಬ್ಯಾಗ್ಗಳನ್ನು ನಿಲ್ದಾಣದ ಮತ್ತೊಂದು ಮೂಲೆಗೆ ಸಾಗಿಸಿದರು.
ವಿಧ್ವಂಸಕ ಕೃತ್ಯ ತಪಾಸಣಾ ತಂಡದ ಅಧಿಕಾರಿಗಳು ಬ್ಯಾಗ್ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಗುಟ್ಕಾ ಮತ್ತು ತಂಬಾಕಿನ ಪ್ಯಾಕೆಟ್ಗಳು ತುಂಬಿದ್ದು ಪತ್ತೆಯಾದವು. ಬಳಿಕ ಪೊಲೀಸರು ಬ್ಯಾಗ್ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಂತೆ ನಿಲ್ದಾಣದಲ್ಲಿ ನೆರೆದಿದ್ದ ಜನರು ನಿಟ್ಟುಸಿರು ಬಿಟ್ಟರು.