ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾದೇಶ ಧಿಕ್ಕರಿಸಿದವರಿಗೆ ಪಾಠ ಕಲಿಸಿ: ಕೆ.ಪಿ.ಬಚ್ಚೇಗೌಡ

ಜೆಡಿಎಸ್‌ ಅಭ್ಯರ್ಥಿ ಎನ್.ರಾಧಾಕೃಷ್ಣ ಪರ ಮತಯಾಚನೆ
Last Updated 4 ಡಿಸೆಂಬರ್ 2019, 12:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಳೆದ ಆರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಸುಳ್ಳು ಆರೋಪಗಳ ಮೇಲೆ ಜನಸಾಮಾನ್ಯರಿಗೆ ಕಿರುಕುಳ ನೀಡಲಾಗುತ್ತಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ. ಆದ್ದರಿಂದ ಭ್ರಷ್ಟಾಚಾರ ಮುಕ್ತ, ನಿರ್ಭೀತ, ಸ್ವಾಭಿಮಾನಿ ಚಿಕ್ಕಬಳ್ಳಾಪುರ ನಿರ್ಮಿಸಬೇಕಾದರೆ ಈ ಬಾರಿ ಮತದಾರರು ಜೆಡಿಎಸ್ ಬೆಂಬಲಿಸಬೇಕು’ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮನವಿ ಮಾಡಿದರು.

ತಾಲ್ಲೂಕಿನ ದೊಡ್ಡಕಿರುಗಂಬಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್‌ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ‘ಇವತ್ತು ಇಡೀ ದೇಶದ ಚರಿತ್ರೆಯಲ್ಲಿ ಚಿಕ್ಕಬಳ್ಳಾಪುರ ಜನ ತಲೆ ತಗ್ಗಿಸಬೇಕಾದ ಘಟನೆ ನಡೆದಿದೆ. ಐದು ವರ್ಷಕ್ಕೆ ಆಯ್ಕೆ ಮಾಡಿದ ಪ್ರತಿನಿಧಿ ಮಾರಿಕೊಂಡಿದ್ದಾರೆ. ಅನರ್ಹ ಶಾಸಕರು ಅಭಿವೃದ್ಧಿಗಾಗಿ ರಾಜೀನಾಮೆ ನೀಡಿರುವೆ ಎನ್ನುವುದು ಶುದ್ಧ ಸುಳ್ಳು. ಅವರು ಸ್ವಂತ ಅಭಿವೃದ್ಧಿ ಹೊಂದಲು, ಆಸ್ತಿ ಮಾಡಲು, ಸಚಿವರಾಗಲು ಬಿಜೆಪಿಗೆ ಹೋಗಿದ್ದಾರೆ’ ಎಂದು ಆರೋಪಿಸಿದರು.

‘ಕುರಿ, ಕೋಳಿಗಳ ರೀತಿ ಶಾಸಕರನ್ನು ಖರೀದಿಸಿದ ಬಿಜೆಪಿಯವರಿಗೆ ಶಾಸಕರನ್ನು ಖರೀದಿಸುವ ಚಾಳಿ ಇದೇ ಮೊದಲೇನಲ್ಲ. 2008ರಲ್ಲಿ ಕೂಡ ಹೀಗೆ ಮಾಡಿದ್ದರು. ಅದೇ ಚಾಳಿ ಇವತ್ತು ಮುಂದುವರಿದಿದೆ. 17 ಶಾಸಕರು ಅದಕ್ಕೆ ತಲೆ ಮಾರಿಕೊಂಡಿದ್ದಾರೆ. ಅನರ್ಹರಾಗಿ ಮತ್ತೆ ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಅವರನ್ನು ತಿರಸ್ಕರಿಸಿ ನಮ್ಮ ಅರ್ಹ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡಿ ಮತ್ತೊಮ್ಮೆ ನಮಗೆ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ತಿಳಿಸಿದರು.

‘ಇವತ್ತು ನನ್ನ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅದನ್ನು ಯಾರೂ ನಂಬಬಾರದು. ನಾನು ಕಳೆದ ಚುನಾವಣೆಯಲ್ಲಿಯೇ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದುಕೊಂಡಿರುವೆ. ನನ್ನ ಬದಲು ರಾಧಾಕೃಷ್ಣ ಅವರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದೇನೆ. ನಾನು, ರಾಧಾಕೃಷ್ಣ ಬೇರೆಬೇರೆಯಲ್ಲ. ನಮ್ಮ ಅಭ್ಯರ್ಥಿ ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರಾಧಾಕೃಷ್ಣ ಅವರು ಪಕ್ಕದ ಶಿಡ್ಲಘಟ್ಟದವರು. ಇವತ್ತು ಯಾವೊಬ್ಬ ಶಾಸಕರು ಕ್ಷೇತ್ರದಲ್ಲಿ ವಾಸಿಸುತ್ತಿಲ್ಲ. ಪ್ರತಿಯೊಬ್ಬರೂ ನಗರದಲ್ಲಿ ವಾಸಿಸುತ್ತಿದ್ದಾರೆ’ ಎಂದರು.

‘ಚಿಕ್ಕಬಳ್ಳಾಪುರ ಜಿಲ್ಲೆ ಕುಮಾರಸ್ವಾಮಿ ಅವರ ಕೊಡುಗೆ. ಸಮ್ಮಿಶ್ರ ಸರ್ಕಾರದ 14 ತಿಂಗಳಲ್ಲಿ ಅವರು ರಾಜ್ಯದ ರೈತರ ₹30 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಬೀದಿ ವ್ಯಾಪಾರಿಗಳಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಬಡ್ಡಿ ರಹಿತ ಸಾಲ ನೀಡಿದರು. ಮಾಸಾಶನಗಳನ್ನು ಹೆಚ್ಚಿಸಿದರು. ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕಾದರೆ, ಭ್ರಷ್ಟರನ್ನು ತೊಲಗಿಸಬೇಕಾದರೆ ಜೆಡಿಎಸ್‌ಗೆ ಮತ ನೀಡಬೇಕು. ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಿ ಕಳುಹಿಸಿ ಅವರು ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿರುತ್ತಾರೆ. ಅದಕ್ಕೆ ನಾನು ಜವಾಬ್ದಾರನಾಗಿರುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ‘ಸಚಿವರಾಗಬೇಕು. ಹಣ, ಆಸ್ತಿ ದುಪ್ಪಟ್ಟು ಮಾಡಿಕೊಳ್ಳಬೇಕು ಎಂಬ ಏಕೈಕ ಕಾರಣಕ್ಕೆ ಉಪ ಚುನಾವಣೆ ತಂದಿಟ್ಟಿದ್ದಾರೆ ವಿನಾ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅಲ್ಲ. ದೇಶದಲ್ಲಿ ಎಲ್ಲಕ್ಕಿಂತ ದೊಡ್ಡದು ಜನತಾ ನ್ಯಾಯಾಲಯ. ಆದರೆ ಜನಾದೇಶವನ್ನು 14 ತಿಂಗಳಿಗೆ ಧಿಕ್ಕರಿಸಿದವರ ಬಗ್ಗೆ ಜನ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಅದು ಮುಂದಿನ ದಿನಗಳಲ್ಲಿ ಯಾವುದೇ ಪಕ್ಷದ ಶಾಸಕರು ರಾಜೀನಾಮೆ ಕೊಡಬೇಕಾದರೆ ಚಿಕ್ಕಬಳ್ಳಾಪುರ ನೆನಪಾಗಬೇಕು. ನೀವು ಕೊಡುವ ತೀರ್ಪು ಶತಶತಮಾನಗಳ ವರೆಗೆ ನೆನಪಿನಲ್ಲಿ ಉಳಿಯಬೇಕು. ರಾಜೀನಾಮೆ ಕೊಡುವವರು ಸಾವಿರ ಬಾರಿ ಯೋಚಿಸುವಂತಾಗಬೇಕು’ ಎಂದು ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ಎನ್.ರಾಧಾಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಮುಖಂಡರಾದ ಮಟಮಪ್ಪ, ಮುಸ್ಟೂರು ಶಿವು, ಶ್ರೀಧರ್, ಗೊಲ್ಲಹಳ್ಳಿ ಮಂಜು ಪ್ರಚಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT