ಗುಡಿಬಂಡೆ: ದಶಕಗಳಿಂದ ಎರಡು ಕಿ.ಮೀ. ಕಾಲುದಾರಿಯಲ್ಲಿ ಹೋಗಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳತ್ತಿದ್ದ ನೂರಾರು ರೈತರು ಸ್ವತಃ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಸುಗಮ ರಸ್ತೆ ನಿರ್ಮಿಸಿಕೊಡುವಂತೆ ಹಲವಾರು ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೊಬ್ಬರೂ ಗಮನ ಹರಿಸದ ಕಾರಣ ಬೆಸತ್ತ ರೈತರು ಸ್ವಂತ ಹಣ ವಿನಿಯೋಗಿಸಿ ತಾತ್ಕಲಿಕ ರಸ್ತೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
‘ಕಾಡಂಚಿನಲ್ಲಿರುವ ಸುಗಾಲಿಗರ ಬೀಡು ಎಂದೇ ಕರೆಸಿಕೊಳ್ಳುವ ಪ್ರದೇಶದಲ್ಲಿ ನಮ್ಮ ಕೃಷಿ ಜಮೀನುಗಳಿವೆ. ಅಲ್ಲಿಗೆ ಹೋಗಿ ಬರಲು ಸಮರ್ಪಕ ರಸ್ತೆ ಇಲ್ಲ. ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮದೇವಿ ದೇವಾಲಯದ ಮುಂಭಾಗದಿಂದ ಹೊರಟು ಕಾಡಂಚಿನ ಕೃಷಿ ಭೂಮಿಯನ್ನು ತಲುಪಲು ಎರಡು ಕಿ.ಮೀ. ಕ್ರಮಿಸಬೇಕು. ಸುಗಮ ರಸ್ತೆ ನಿರ್ಮಾಣಕ್ಕಾಗಿ ಮಾಡಿದ ಮನವಿಗಳು ಕಸದ ಬುಟ್ಟಿ ಸೇರಿವೆ. ಹಾಗಾಗಿ ನಾವೇ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದೇವೆ’ ಎಂದುರೈತ ರಮೇಶ್ ಹೇಳಿದರು.
‘ಆ ಪ್ರದೇಶದಲ್ಲಿ ಅನೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರ ನೂರಾರು ಎಕರೆ ಕೃಷಿ ಭೂಮಿ ಇದೆ. ಮಧ್ಯದಲ್ಲಿ ವಾಟದಹೊಸಹಳ್ಳಿ ಕೆರೆಗೆ ಹೋಗುವ ಪ್ರಮುಖ ಕಾಲುವೆ ಸಹ ಇದೆ. ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡಿರುವ ರೈತರು ಮಳೆಯಾಶ್ರಿತ ಬೆಳೆಗೆ ಪ್ರಾಮುಖ್ಯ ನೀಡುತ್ತಾರೆ. ಕೃಷಿ ಜಮೀನು ಇರುವ ಪ್ರದೇಶದ ಸುತ್ತಮುತ್ತಾ ಬೆಟ್ಟಗಳು ಇದ್ದು ಮಳೆಬಂದರೆ ಕಾಲುವೆ ತುಂಬಿ ಹರಿಯುವುದರಿಂದ ಜಮೀನಿನತ್ತ ಹೋಗಲು ಆಗುವುದಿಲ್ಲ. ಅಲ್ಲದೆ ಕಾಡುಪ್ರಾಣಿಗಳು ಬೆಳೆಯ ಮೇಲೆ ದಾಳಿ ಇಡುತ್ತವೆ. ಜತೆಗೆ ಈ ರಸ್ತೆಯಲ್ಲಿ ಹೋಗುವಾಗ ಅನೇಕ ರೈತ ಮಹಿಳೆಯರು ಬಿದ್ದು ಗಾಯಗೊಂಡಿದ್ದಾರೆ’ ಮತ್ತೊಬ್ಬ ರೈತ ಅಳಲು ತೋಡಿಕೊಂಡರು.
ರೈತರಾದ ಮಲ್ಲಿಕಾರ್ಜುನ್, ಜಯಮ್ಮ, ಮುದ್ದಮ್ಮ, ಗಂಗಮ್ಮ, ಮಾರಪ್ಪ, ಶ್ರೀನಿವಾಸ್, ನಾರಾಯಣಪ್ಪ, ವೆಂಕಟರಮಣಪ್ಪ, ನರಸಿಂಹಪ್ಪ, ಆದೆಪ್ಪ, ಆವುಲಪ್ಪ ಲಂಬೂಸತ್ಯಪ್ಪ ಕಾಸೀಂ, ಅಮರನಾಯಣ ಇನ್ನಿತರ ರೈತರು ರರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾರೆ.