ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವುದರ ಮೂಲಕ ತಾವು ಓದಿದ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಬೇಕು. ಜೀವನದಲ್ಲಿ ಯಶಸ್ಸು ಗಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಹಿರಿಯ ನಟ ರಮೇಶ್ ಭಟ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ವಿದ್ಯಾಭ್ಯಾಸ ಮತ್ತು ಪ್ರಾಮಾಣಿಕ ಶ್ರಮದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು’ ಎಂದರು.
ಬಡತನ, ಆರ್ಥಿಕ ಸಮಸ್ಯೆ ಮುಂತಾದವುಗಳಿಂದ ಬಹುತೇಕ ಮಂದಿಗೆ ವಿದ್ಯಾಭ್ಯಾಸ ಗಳಿಸಲು ಸಾಧ್ಯವಾಗುವುದಿಲ್ಲ. ಶಿಕ್ಷಣದ ಬಗ್ಗೆ ಆಸಕ್ತಿಯಿದ್ದರೂ ಅವರಿಗೆ ಸೌಲಭ್ಯಗಳು ಸಿಗುವುದಿಲ್ಲ. ಕೆಲವು ಜನರಿಗೆ ಮಾತ್ರವೇ ಶಿಕ್ಷಣದ ಸೌಲಭ್ಯ ಸಿಗುತ್ತಿದ್ದು, ಅವರಲ್ಲಿ ನೀವು ಒಬ್ಬರು. ಈ ಕಾರಣದಿಂದಲೇ ವಿದ್ಯಾರ್ಥಿ ದಿನಗಳನ್ನು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು. ಜೀವನದ ಸಾಧನೆ ಮತ್ತು ಗುರಿಯಿಂದ ಯಾವುದೇ ಕಾರಣಕ್ಕೂ ವಿಮುಖರಾಗಬಾರದು ಎಂದು ಅವರು ತಿಳಿಸಿದರು.
ಕಾಲೇಜಿನಲ್ಲಿ ಶಿಕ್ಷಣ ಪಡೆಯುವಾಗಲೇ ಭವಿಷ್ಯದ ಬಗ್ಗೆ ದೃಢ ನಿರ್ಣಯ ತೆಗೆದುಕೊಂಡರೆ ಅನುಕೂಲ. ಸುಂದರ ಭವಿಷ್ಯ ರೂಪಿಸಿಕೊಳ್ಳಲು ಹಿರಿಯರ, ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ ಎಂದು ತಿಳಿಸಿದರು.