ಚಿಕ್ಕಬಳ್ಳಾಪುರ: ಭಗತ್ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದ ಕರಗ ಮಹೋತ್ಸವದ ಭಾಗವಾಗಿ ಸೋಮವಾರ ಭುವನೇಶ್ವರಿ ವೃತ್ತದಲ್ಲಿ ‘ಒನಕೆ ಕರಗ’ದ ಆಚರಣೆ ನಡೆಯಿತು.
ಕರಗದ ಪೂಜಾರಿ ಕುಪ್ಪಂ ಬಾಲಾಜಿ ಅವರು ಸುಮಾರು 6 ಅಡಿ ಉದ್ದದ ಒನಕೆಯ ಒನಕೆ ಮೇಲೆ ಅರಿಶಿಣ ನೀರು ತುಂಬಿಟ್ಟ ತಾಮ್ರದ ಪಾತ್ರೆ ಇಟ್ಟುಕೊಂಡು ತಮಟೆಯ ವಾದನಕ್ಕೆ ತಕ್ಕಂತೆ ನೃತ್ಯ ಮಾಡಿ ನೆರೆದಿದ್ದ ಸಮೂಹದಲ್ಲಿ ವಿಸ್ಮಯ ಮೂಡಿಸಿದರು.
ತಲೆ ಮೇಲೆ ನಿಂತ ಒನಕೆ ಸಮತೋಲನ ಕಳೆದುಕೊಳ್ಳದಂತೆ ಚಾಕಚಕ್ಯತೆಯಿಂದ ವಾದ್ಯದ ಗತ್ತಿಗನುಗುಣವಾಗಿ ಗೆಜ್ಜೆಯ ಕಾಲಿನ ತಾಳದೊಂದಿಗೆ ಲಯಬದ್ಧವಾಗಿ ಕುಣಿದ ಬಾಲಾಜಿ ಅವರು, ಕುಣಿತ ಪರಾಕಾಷ್ಠೆಗೆ ಮುಟ್ಟಿದಾಗ ಎರಡೂ ಕೈಗಳನ್ನು ಬಿಟ್ಟು ಮೈ ಮರೆತವರಂತೆ ಕುಣಿಯುವುದು ಕಂಡು ನೆರೆದವರೆಲ್ಲ ಬೆಕ್ಕಸ ಬೆರಗಾದರು.
ನೃತ್ಯದ ದೃಶ್ಯವನ್ನು ಬಹುತೇಕರು ಮೊಬೈಲ್ಗಳಲ್ಲಿ ಸೆರೆ ಹಿಡಿಯುತ್ತಿದ್ದದ್ದು ಕಂಡುಬಂತು. ನೃತ್ಯದ ಬಳಿಕ ವೀರಕುಮಾರರು ಪರಸ್ಪರ ನೀರನ್ನು ಎರಚಾಡಿಕೊಳ್ಳುವ ಮೂಲಕ ‘ಓಕುಳಿಯಾಟ’ ಆಡಿದರು.