ಚಿಂತಾಮಣಿ : ಉತ್ತಮ ಗುಣಮಟ್ಟದ ರೇಷ್ಮೆ ಹಾಗೂ ಹೆಚ್ಚಿನ ಇಳುವರಿ ಪಡೆಯಲು ರೇಷ್ಮೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿ ಡಾ.ವಿಜಯೇಂದ್ರ ಸಲಹೆ ನೀಡಿದರು.
ನಗರದಲ್ಲಿ ಬುಧವಾರ ಜಲ ಸಂವರ್ಧನಾ ಯೋಜನಾ ಸಂಘ ಹಾಗೂ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ರೇಷ್ಮೆ ಬೆಳೆ~ ಕುರಿತಾದ ವಾರ್ಷಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ರೇಷ್ಮೆ ಬೆಳೆಯನ್ನು ವರ್ಷದ ಎಲ್ಲ ಸಮಯದಲ್ಲೂ ಬೆಳೆಯಬಹುದು. ರೈತರು ವಾತಾವರಣಕ್ಕೆ ತಕ್ಕಂತೆ ತಂತ್ರ ಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನ ಕೇಂದ್ರದಿಂದ ಅಗತ್ಯವಿದ್ದಾಗ ಸೂಕ್ತ ಸಲಹೆ ಸೂಚನೆ ಪಡೆದು ಕೊಳ್ಳಬೇಕು ಎಂದರು.
ರೇಷ್ಮೆ ಬೆಳೆಗಾರರು ಹಳೇ ಕಾಲದ ಪದ್ಧತಿ ಹಾಗೂ ಆಧುನಿಕ ಬೆಳೆ ಪದ್ಧತಿ ಪರಾಮರ್ಶಿಸಿ ಅಳವಡಿಸಿಕೊಳ್ಳಬೇಕು ಎಂದು ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ನಾಗರಾಜ್, ಕೃಷಿ ಅಧಿಕಾರಿ ಡಾ.ಲಿಂಗಮೂರ್ತಿ, ಸಿ.ಚಿಕ್ಕಣ್ಣ, ಕೃಷಿ ವಿಜ್ಞಾನ ಕೇಂದ್ರದ ಯೋಜನಾ ನಿರ್ದೆಶಕ ಡಾ.ಶಂಕರನಾರಾಯಣ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಲ್.ಎಚ್.ನಾಯಕ್, ತಾಲ್ಲೂಕು ಸಹಾಯಕ ಕೃಷಿ ನಿರ್ದೆಶಕ ಡಾ.ಕೆ.ನಯೀಂಪಾಷಾ, ವಿಜ್ಞಾನಿಗಳಾದ ಡಾ.ಶಿವಾನಂದಂ, ಡಾ.ಕೆ.ಎಂ.ರಾಜಣ್ಣ, ಡಾ.ಬಿ.ಎನ್.ಶಿವರಾಂ, ಎಂ.ಗಾಯತ್ರಿ ಮೊದಲಾದವರು ಭಾಗವಹಿಸಿದ್ದರು.