ಚಿಕ್ಕಬಳ್ಳಾಪುರ: ಸುವರ್ಣ ಭೂಮಿ ಯೋಜನೆಯಡಿ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಸಂಬಂಧ ಪಟ್ಟ ಇಲಾಖೆಗಳು ಬಿಡುಗಡೆ ಮಾಡಿದ್ದು, ಇದರ ಪ್ರಯೋಜನವನ್ನು ರೈತರು ಪಡೆಯುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ.ಸಿ.ನಟರಾಜ್ ತಿಳಿಸಿದ್ದಾರೆ.
ಸುವರ್ಣ ಭೂಮಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಯೋಜನೆಯ ವಿವರಗಳನ್ನು ನೀಡಿದ ಅವರು, `ಕೃಷಿ ಇಲಾಖೆಯಲ್ಲಿ ಒಟ್ಟು 14,953 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಒಟ್ಟು 594.92 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಒಟ್ಟು 503.93 ಲಕ್ಷ ರೂಪಾಯಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನೂ 665 ಫಲಾನುಭವಿಗಳಿಗೆ ಹಣ ಸಂದಾಯ ವಾಗಬೇಕಿದೆ~ ಎಂದರು.
ತೋಟಗಾರಿಕೆ ಇಲಾಖೆಯಲ್ಲಿ ಆಯ್ಕೆಯಾದ ಒಟ್ಟು 7,481 ಫಲಾನುಭವಿಗಳಿಗೆ 265.19 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಒಟ್ಟು 5,301 ಫಲಾನುಭವಿಗಳ ಖಾತೆಗೆ 201.03 ಲಕ್ಷ ರೂಪಾಯಿ ಜಮಾ ಮಾಡಲಾಗಿದೆ. ಜೇನು ಸಾಕಾಣಿಕೆ ಯಲ್ಲಿ ಒಟ್ಟು 332 ಫಲಾನುಭ ವಿಗಳಿದ್ದು, ಒಟ್ಟು 13.30 ಲಕ್ಷ ಬಿಡು ಗಡೆಯಾಗಿದೆ ಎಂದು ತಿಳಿಸಿದರು.
ರೇಷ್ಮೆ ಇಲಾಖೆಯಲ್ಲಿ ಒಟ್ಟು 5860 ಫಲಾನುಭವಿಗಳಿದ್ದು, ಒಟ್ಟು 189.76 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಒಟ್ಟು 4,625 ಫಲಾನುಭವಿಗಳ ಖಾತೆಗೆ 156.36 ಲಕ್ಷ ರೂಪಾಯಿ ಅನುದಾನ ಜಮಾ ಮಾಡಲಾಗಿದೆ. ಇನ್ನೂ 315 ಫಲಾನುಭವಿಗಳಿಗೆ ಸಂದಾಯ ಮಾಡಬೇಕಿದೆ. ಮೀನುಗಾರಿಕೆ ಇಲಾಖೆಯಲ್ಲಿರುವ 318 ಫಲಾನುಭವಿಗಳಿಗೆ ಒಟ್ಟು 45.39 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅರಣ್ಯ ಇಲಾಖೆಯಲ್ಲಿ 81 ಫಲಾನುಭ ವಿಗಳಿದ್ದು, ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸುವರ್ಣ ಭೂಮಿ ಯೋಜನೆಯಡಿ ಒಟ್ಟು 27064 ಅರ್ಹ ಫಲಾನುಭವಿಗಳಿದ್ದು, ಒಟ್ಟು ರೂ.1107.36 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.