ಇದು ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ರೈತರ ಸ್ಥಿತಿ. ಬಿರು ಬಿಸಿಲಿನಿಂದ ಬಳಲಿರುವ ಶಿವನಿ, ಚೀರನಹಳ್ಳಿ, ಹರಳಹಳ್ಳಿ, ತಡಗ, ಗಡೀಹಳ್ಳಿ, ಮುಗುಳಿ, ದಂದೂರು, ನಾರಾಯಣಪುರ ಸೇರಿ ಹಲವು ಹಳ್ಳಿಗಳಲ್ಲಿ ಮೌನ ಆವರಿಸಿದೆ. ಯಾವ ರೈತರ ಮುಖದಲ್ಲೂ ಕಳೆ ಇಲ್ಲ. ಬಾಡಿದ ಮುಖದೊಂದಿಗೆ ತಲೆಯ ಮೇಲೆ ಟವೆಲ್ ಸುತ್ತಿಕೊಂಡು ಎದುರಾಗುವ ಯಾವ ರೈತರನ್ನು ಮಾತಿಗೆ ಎಳೆದರೂ ಮುಗಿಲಿನತ್ತ ಮುಖ ಮಾಡುತ್ತಾರೆ. ಎಲ್ಲರ ಮುಖದಲ್ಲೂ ಸಂಕಟದ ಛಾಯೆ ಎದ್ದು ಕಾಣುತ್ತದೆ.