ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರು – ಬಹುಸಂಖ್ಯಾತರ ನಡುವಿನ ಅಂತರ ಹೆಚ್ಚಳ: ಗೊ.ರು.ಚನ್ನಬಸಪ್ಪ

Last Updated 28 ಮಾರ್ಚ್ 2022, 11:13 IST
ಅಕ್ಷರ ಗಾತ್ರ

ಅಜ್ಜಂಪುರ (ಚಿಕ್ಕಮಗಳೂರು): ‘ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಿನ ಅಂತರ ದಿಗ್ಭ್ರಮೆಗೊಳಿಸುವಂತೆ ಹೆಚ್ಚಾಗುತ್ತಿದೆ. ಭಾಷೆ, ನೆಲ, ಜಲಗಳ ವಿವಾದಗಳು ಹೆಚ್ಚುತ್ತಿವೆ’ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಗುರುಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ‘ಜಾತಿ, ಮತಗಳ ಪರಸ್ಪರ ದ್ವೇಷ–ಅಸೂಯೆಗಳಂತೂ ಅಸಹ್ಯದ ಅಂಚು ಮುಟ್ಟಿದೆ. ಮಾನವೀಯ ಸಂಬಂಧಗಳು ಬೆಂಕಿಯಲ್ಲಿ ಬಿದ್ದು ಬೇಯುವ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಾಗತೀಕರಣ, ರಾಜಕೀಯ ಸ್ಥಿತ್ಯಂತರಗಳ ಅಬ್ಬರದಲ್ಲಿ ನಾಡಿನ ಜನರ ನೈತಿಕಮಟ್ಟ ಕುಸಿದಿದೆ. ವೈಚಾರಿಕ ಚಿಂತನೆಗೆ ಕ್ಷಯರೋಗ ತಗುಲಿದೆ. ಭಾಷೆ, ಸಮಷ್ಟಿ ಹಿತಕ್ಕಿಂತ ವ್ಯಕ್ತಿ ಹಿತವೇ ಮೇಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸದಸ್ಯರ ಸಂಖ್ಯೆ ಸಂಗ್ರಹ ಚಳವಳಿ ಅಗತ್ಯ ಇಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿ ಮಾಡುತ್ತೇವೆ ಎಂಬ ಮಾತು ಕೇಳಿಬರುತ್ತಿದೆ. ಇಂಥ ಸಂಸ್ಥೆಗೆ ಸದಸ್ಯರ ಸಂಖ್ಯೆ ಸಂಗ್ರಹ ಚಳವಳಿ ಅಗತ್ಯ ಇಲ್ಲ, ಸಾಹಿತ್ಯದಲ್ಲಿ ಆಸಕ್ತಿ ಇರುವವರು ಸದಸ್ಯರಾದರೆ ಸಾಕು. ಪರಿಷತ್ತು ರಾಜಕೀಯ ಅಥವಾ ಜನಾಂಗೀಯ ಸಂಸ್ಥೆಯಲ್ಲ’ ಎಂದು ಗೊರುಚ ಹೇಳಿದರು.

ಪ್ರಸಕ್ತ ಪರಿಷತ್ತಿನ ಕೇಂದ್ರ ಕಾರ್ಯಸಮಿತಿಯು ಪರಿಷತ್ತಿನ ನಿಬಂಧನೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ಆಸಕ್ತಿ ಹೊಂದಿರುವಂತೆ ಕಾಣುತ್ತಿದೆ. ಪರಿಷತ್ತಿನ ಚಟುವಟಿಕೆಗಳನ್ನು ನಿರ್ವಹಿಸಲು ಈಗಿರುವ ನಿಬಂಧನೆಗಳಲ್ಲಿ ಮುಕ್ತ ಅವಕಾಶಗಳು ಇವೆ. ಪರಿಷತ್ತಿನ ಮೂಲ ಧ್ಯೇಯೋದ್ದೇಶಗಳ ಅನುಷ್ಠಾನಕ್ಕೆ ಆದ್ಯ ಗಮನಕೊಡುವುದು ಅಗತ್ಯ ಎಂದು ಸಲಹೆ ನೀಡಿದರು.

‘ಅನಿವಾರ್ಯವಾಗಿ ಕೆಲ ಬದಲಾವಣೆಗಳನ್ನು ಮಾಡಲೇಬೇಕಿದ್ದರೆ ಮಾಡುವುದರಲ್ಲಿ ತಪ್ಪಿಲ್ಲ. ನಾಡಿನ ಸಾಹಿತಿಗಳು, ವಿದ್ವಾಂಸರು, ಅನುಭವಿಗಳ ಸಲಹೆ ಪಡೆದು ಮುಂದುವರಿಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT