ಚಿಕ್ಕಮಗಳುರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಮತ್ತು ಮಾಣಿಕ್ಯಧಾರ ಜಲಪಾತ ನಡುವಿನ ದುರ್ಗಮ ಹಾದಿಯಲ್ಲಿ ಪ್ರವಾಸಿಗರ ಮಿನಿ ಬಸ್ ಪಲ್ಟಿಯಾಗಿದ್ದು, ಆರು ವರ್ಷದ ಬಾಲಕ ನವಾಜ್ ಮೃತಪಟ್ಟಿದ್ದಾನೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಿಂದ ಬಂದಿದ್ದ ಪ್ರವಾಸಿಗರು, ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ತೆರಳಿದ್ದರು. ಮಾಣಿಕ್ಯಧಾರಕ್ಕೆ ತೆರಳುವ ಮಾರ್ಗ ದುರ್ಗಮವಾಗಿದ್ದು, ಈ ಹಾದಿಯಲ್ಲಿ ಒಂದು ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ವಾಹನ ಸಂಚಾರ ಸಾಧ್ಯವಿಲ್ಲದ ಸ್ಥಿತಿ ಇದೆ.
ಈ ರಸ್ತೆಯಲ್ಲಿ ಸಾಗಿದ ಮಿನಿ ಬಸ್ ರಸ್ತೆಯಿಂದ ಇಳಿಜಾರು ಪ್ರದೇಶಕ್ಕೆ ಉರುಳಿದೆ. ಬಸ್ ಉರುಳಿದ ರಭಸಕ್ಕೆ ತಲೆಕೆಳಗಾಗಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಉಸಿರುಗಟ್ಟಿದ್ದ ಆರು ವರ್ಷದ ಬಾಲಕ ನವಾಜ್ನನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.