ನವರಾತ್ರಿ ಉತ್ಸವದ ಅಂಗವಾಗಿ ದುರ್ಗಾಸೇವಾ ಸಮಿತಿ ವತಿಯಿಂದ ದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ದುರ್ಗಾಮಾತೆಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಮೊದಲ ದಿನ ಗಣಪತಿ ಹೋಮ ನಡೆಸಲಾಯಿತು. ಶ್ರೀ ದುರ್ಗಾ ಸಮಿತಿಯ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡರು. ನವರಾತ್ರಿ ಉತ್ಸವದ ಅಂಗವಾಗಿ ಅಂಗಡಿ ಗ್ರಾಮದ ವಸಂತ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿ ದಿನವೂ ರಾತ್ರಿ 8 ಕ್ಕೆ ಮಹಾಮಂಗಳಾರತಿ, ಅನ್ನ ಸಂತರ್ಪಣೆ ನಡೆಯಲಿದೆ. ತಾಲ್ಲೂಕಿನ ಸಾರಗೋಡು ಗ್ರಾಮದ ದೇವಿರಮ್ಮ ದೇವಾಲಯ, ತಲಗೂರು ಗ್ರಾಮದ ಕಾಡುಮನೆ ಚಾಮುಂಡೇಶ್ವರಿ ದೇವಾಲಯ, ಎಸ್ಟೇಟ್ ಕುಂದೂರು ಚಾಮುಂಡೇಶ್ವರಿ ದೇವಾಲಯಗಳಲ್ಲಿ ಪೂಜೆ ನಡೆಯಲಿದೆ.