ಕಡೂರು: ಕಾಡುಗೊಲ್ಲ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಒತ್ತಾಯಿಸಿ ತಾಲ್ಲೂಕು ಕಾಡುಗೊಲ್ಲರ ಸಂಘದ ಸದಸ್ಯರು ತಾಲ್ಲೂಕು ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ. ತಿಮ್ಮೇಗೌಡ ಮಾತನಾಡಿ, ‘ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ. ಕುಲ ಕಸುಬು ಮಾಡಿಕೊಂಡು ಕಷ್ಟದಿಂದ ಬದುಕುತ್ತಿರುವ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು ದೊರೆತಿಲ್ಲ. ಸರ್ಕಾರ ನಮ್ಮ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯದಾದ್ಯಂತ ಸಾಂಕೇತಿಕ ಧರಣಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.
ಕಾಡುಗೊಲ್ಲರ ಕುಲದೇವತೆ ಜುಂಜಪ್ಪನ ಹಸೆ ಬರೆದು, ಭಜನೆ ಪದಗಳನ್ನು ಹಾಡುವ ಮೂಲಕ ಧರಣಿ ನಡೆಸಲಾಯಿತು. ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದೇವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಈರಪ್ಪ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದಾನೇಶ್ ಪೂಜಾರಿ, ಉಪಾಧ್ಯಕ್ಷ ವೆಂಕಟೇಶ್ ಶಾಂತಪ್ಪ, ನಾಗರಾಜು, ಪಾರ್ಥ, ಅಣ್ಣಪ್ಪ, ಆರ್.ಜಿ.ಕೊಪ್ಪಲು ಮೂಡ್ಲಪ್ಪ, ದೊಡ್ಡೀರಪ್ಪ, ಯುವ ಘಟಕದ ಓಂಕಾರ್ ಇದ್ದರು.