ಚಿಕ್ಕಮಗಳೂರು: ಕೋವಿಡ್–19 ನಿಟ್ಟಿನಲ್ಲಿ ಕಾರ್ಯನಿರತ ಸರ್ಕಾರಿ ವೈದ್ಯರಿಗೆ ಘೋಷಿಸಿರುವ ₹ 50 ಲಕ್ಷ ವಿಮೆ ಸವಲತ್ತನ್ನು ಖಾಸಗಿ ವೈದ್ಯರಿಗೂ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದರು.
ಮಾಧ್ಯಮದವರು ಕೊರೊನಾ ವಾರಿಯರ್ಸ್ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಅವರಿಗೆ ಕೋವಿಡ್–19 ದೃಢಪಟ್ಟರೆ ನಿಗದಿತ ಆಸ್ಪತ್ರೆ ವ್ಯವಸ್ಥೆ ಮಾಡಿ, ಚಿಕಿತ್ಸೆ ನೀಡುವ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದು ಉತ್ತರಿಸಿದರು.
ಕೊರೊನಾ ಎಷ್ಟು ಕಾಲ ಇರುತ್ತೆ ಎಂಬುದು ಗೊತ್ತಿಲ್ಲ. ಇನ್ನು ಆರು ತಿಂಗಳು ಜನರ ಸೇವೆ ಮಾಡಲು ಮಾನಸಿಕವಾಗಿ ಈಗಲೇ ತಯಾರಾಗುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.